ಮಂಡ್ಯ: ರಾಜ್ಯದಲ್ಲಿ ಉಪ ಚುನಾವಣೆಯ ಚಟುವಟಿಕೆಗಳು ಗರಿಗೆದರಿದ್ದು, ಅಭ್ಯರ್ಥಿಗಳು ಅಂತಿಮವಾದ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಅಬ್ಬರದಿಂದ ಸಾಗುತ್ತಿದೆ. ಇತ್ತ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಡಾ.ಸಿದ್ದರಾಮಯ್ಯರನ್ನು ಅಂತಿಮಗೊಳಿಸಿದೆ. ಹೆಸರನ್ನು ಘೋಷಣೆ ಮಾಡಿ ಮೂರು ದಿನ ಕಳೆದರೂ, ಸಿದ್ದರಾಮಯ್ಯನವರು ಮಾತ್ರ ಮಂಡ್ಯ ಕಡೆ ಇದೂವರೆಗೆ ತಲೆ ಹಾಕಿಲ್ಲ. ಸ್ಥಳೀಯ ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯನವರ ಹುಡುಕಾಟದಲ್ಲಿದ್ದಾರೆ.
ಈಗಾಗಲೇ ಪಕ್ಷದ ವರಿಷ್ಠರು ಡಾ. ಸಿದ್ದರಾಮಯ್ಯ ಬಿಜೆಪಿ ಅಭ್ಯರ್ಥಿ ಎಂದು ಹೇಳಿದ್ದಾರೆ. ಆದರೆ ಸಿದ್ದರಾಮಯ್ಯ ಇನ್ನೂ ಕೂಡ ಮಂಡ್ಯದ ಕಡೆ ತಲೆ ಹಾಕಿಲ್ಲ. ಹೀಗಾದರೆ ಜನರ ಬಳಿ ಹೋಗಿ ವೋಟ್ ಕೇಳೋದಾದರೂ ಹೇಗೆ ಎಂದು ಮಂಡ್ಯ ಬಿಜೆಪಿ ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ.
ಸಿದ್ದರಾಮಯ್ಯ ಅವರ ಈ ನಡೆ ನೋಡಿದರೆ ಅವರೇ ಅಭ್ಯರ್ಥಿಯಾ? ಎಂಬ ಅನುಮಾನ ಮೂಡುತ್ತಿದೆ. ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಕೂಡ ಸಾಧ್ಯವಾಗುತ್ತಿಲ್ಲ. ಇದೆಲ್ಲವನ್ನು ನೋಡಿದರೆ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಸ್ವತಂತ್ರವಾಗಿ ಆಯ್ಕೆ ಮಾಡುವ ಹುನ್ನಾರ ನಡೆಯುತ್ತಿದೆ ಅನಿಸುತ್ತಿದೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕುತ್ತಿದ್ದಾರೆ.
ಸಿದ್ದರಾಮಯ್ಯರ ಬರುವಿಕೆಗಾಗಿ ನಾವೆಲ್ಲ ಕಾಯುತ್ತಿದ್ದೇವೆ. ಜಿಲ್ಲೆಯ ಜನತೆಗೆ ಸಿದ್ದರಾಮಯ್ಯರನ್ನು ಪರಿಚಯಿಸಬೇಕಿದೆ. ಅಭ್ಯರ್ಥಿ ಇಲ್ಲದೇ ಜನರ ಬಳಿ ಮತ ಕೇಳೋದು ಹೇಗೆ? ಜಿಲ್ಲೆಯಲ್ಲಿರುವ ಕಾರ್ಯಕರ್ತರನ್ನು ಅಭ್ಯರ್ಥಿಯಾಗಿ ಮಾಡಿದ್ದರೆ ಚೆನ್ನಾಗಿ ಇರುತ್ತಿತ್ತು. ಹೊಸಬರನ್ನು ಆಯ್ಕೆ ಮಾಡಿದರೂ ಯಾರು ವಿರೋಧ ವ್ಯಕ್ತಪಡಿಸಿಲ್ಲ. ಫೋನ್ ಮಾಡಿದ್ದರು ಸಂಪರ್ಕಕ್ಕೆ ಸಿಗುತ್ತಿಲ್ಲ. ಬಿಜೆಪಿ ಘೋಷಿತ ಅಭ್ಯರ್ಥಿ ಸಿದ್ದರಾಮಯ್ಯ ಮಂಡ್ಯಕ್ಕೆ ಬರದಿದ್ದರೆ ಅವರನ್ನು ಹುಡುಕಿಕೊಡಿ ಎಂದು ಪಕ್ಷದ ಅಧ್ಯಕ್ಷರಿಗೂ ಮತ್ತು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಬೇಕಾಗುತ್ತೆ ಎಂದು ಬಿಜೆಪಿ ಕಾರ್ಯಕರ್ತ ಸಿದ್ದರಾಜು ಎಚ್ಚರಿಕೆ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv