ಬೆಂಗಳೂರು: ಇತ್ತೀಚಿಗಷ್ಟೇ ಉಜ್ಜಯಿನಿ ಮಹಾಕಾಳೇಶ್ವರ ದೇವಾಲಯದಲ್ಲಿ ಹಿಂದೂಯೇತರರ ಪ್ರವೇಶ ನಿಷೇಧ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿದೆ. ಉಜ್ಜಯಿನಿ ಸಂತರು ಮತ್ತು ಹಿಂದೂ ಸಂಘಟನೆಗಳು ಮಂಡಿಸಿರುವ ನಿಲುವನ್ನು ಬೆಂಬಲಿಸುತ್ತಾ ಮಂದಿರ ಮಹಾಸಂಘವು ಕರ್ನಾಟಕದ ಎಲ್ಲ ದೇವಾಲಯಗಳಲ್ಲಿ ಹಿಂದೂಯೇತರರ ಪ್ರವೇಶ ನಿಷೇಧಿಸಲಿ ಎಂದು ಧಾರ್ಮಿಕ ದತ್ತಿ ಇಲಾಖೆಗೆ ಆಗ್ರಹಿಸಿದೆ.
ಕರ್ನಾಟಕ ಮಂದಿರ ಮಹಾಸಂಘದ ರಾಜ್ಯ ಸಂಯೋಜಕರಾದ ಶ್ರೀ.ಮೋಹನ್ ಗೌಡ ಅವರು, ಹಿಂದೂ ತೀರ್ಥಕ್ಷೇತ್ರಗಳು ಕೇವಲ ಪ್ರವಾಸಿ ಕೇಂದ್ರಗಳಲ್ಲ, ಬದಲಾಗಿ ಹಿಂದೂಗಳ ಪವಿತ್ರ ಮತ್ತು ಜಾಗೃತ ಆಧ್ಯಾತ್ಮಿಕ ಕ್ಷೇತ್ರಗಳಾಗಿವೆ. ಯಾರಿಗೆ ಮೂರ್ತಿ ಪೂಜೆಯಲ್ಲಿ ನಂಬಿಕೆಯಿಲ್ಲವೋ, ಯಾರು ಹಿಂದೂ ಸಂಸ್ಕೃತಿಯನ್ನು ಗೌರವಿಸುವುದಿಲ್ಲವೋ ಮತ್ತು ಯಾರು ಗೋಮಾಂಸ ಭಕ್ಷಣೆ ಮಾಡುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ತುಳಿಯುತ್ತಾರೋ, ಅಂತಹವರಿಗೆ ದೇವಸ್ಥಾನದ ಪ್ರವೇಶ ಏಕೆ ಬೇಕು? ಅವರ ಮೇಲೆ ಪ್ರವೇಶ ನಿಷೇಧವೇ ಹೇರಲ್ಪಡಬೇಕು ಎಂಬ ನಿಲುವನ್ನು ಮಂದಿರ ಮಹಾಸಂಘವು ಮಂಡಿಸಿದೆ. ಇದನ್ನೂ ಓದಿ: ಮಹಾಕಾಳೇಶ್ವರ ದೇವಸ್ಥಾನದಲ್ಲಿ VIP ದರ್ಶನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ
ದೇವಸ್ಥಾನಗಳ ಸಾತ್ತ್ವಿಕ ವಾತಾವರಣವನ್ನು ಕಾಪಾಡಲು ಮತ್ತು ಪವಿತ್ರತೆಗೆ ಧಕ್ಕೆ ಬರದಂತೆ ತಡೆಯಲು, ಅಹಿಂದೂಗಳ ದೇವಸ್ಥಾನ ಹಾಗೂ ದೇವಸ್ಥಾನದ ಆವರಣದ ಪ್ರವೇಶವನ್ನು ತಕ್ಷಣವೇ ನಿಷೇಧಿಸುವುದು ಕಾಲದ ಅಗತ್ಯವಾಗಿದೆ. ಈ ಕುರಿತು ಗೋವಾದ ಫೋಂಡಾದಲ್ಲಿ ನಡೆದ ಮಂದಿರ ಮಹಾಸಂಘದ ರಾಷ್ಟ್ರೀಯ ಮಟ್ಟದ ಕಾರ್ಯಾಗಾರದಲ್ಲಿ ಮಹಾರಾಷ್ಟ್ರ, ಗೋವಾ, ಕರ್ನಾಟಕ ಮತ್ತು ಛತ್ತೀಸ್ಗಢದ ವಿವಿಧ ದೇವಸ್ಥಾನಗಳ ವಿಶ್ವಸ್ತರು ಒಮ್ಮತದಿಂದ ನಿರ್ಣಯವನ್ನು ಅಂಗೀಕರಿಸಿದ್ದಾರೆ. ಇದರೊಂದಿಗೆ ಕರ್ನಾಟಕದಲ್ಲಿಯೂ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ, ಮೈಸೂರಿನ ಚಾಮುಂಡೇಶ್ವರಿ ದೇವಾಲಯ, ಶ್ರೀರಂಗಪಟ್ಟಣ ಸೇರಿದಂತೆ ಎಲ್ಲ ಖಾಸಗಿ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ದೇವಾಲಯಗಳಲ್ಲಿ ಹಿಂದೂಯೇತರರ ಪ್ರವೇಶ ಕೂಡಲೇ ನಿಷೇಧಿಸಬೇಕು ಎಂದು ಆಗ್ರಹಿಸಿದರು.
ಹಿಂದೂ ದೇವಾಲಯಗಳ ರಕ್ಷಣೆಗಾಗಿ ಈ ನಿಯಮಾವಳಿಗಳು ಜಾರಿಯಾಗಲೇಬೇಕು. ತೀರ್ಥಕ್ಷೇತ್ರಗಳ ಪರಿಸರದಲ್ಲಿ ಪವಿತ್ರತೆಯನ್ನು ಹಾಳುಮಾಡುವುದು ಮತ್ತು ಗುಪ್ತವಾಗಿ ಪ್ರವೇಶಿಸುವ ವಿಧ್ವಂಸಕ ಶಕ್ತಿಗಳಿಂದಾಗಿ ಹಿಂದೂ ದೇವಾಲಯಗಳ ಸುರಕ್ಷತೆಗೆ ಗಂಭೀರ ಪ್ರಶ್ನೆ ಉದ್ಭವಿಸಿದೆ. ಆದ್ದರಿಂದ ನಾವು ಈ ಬೇಡಿಕೆಯನ್ನು ಮಂಡಿಸುತ್ತಿದ್ದೇವೆ ಎಂದು ಹೇಳಿದರು.ಇದನ್ನೂ ಓದಿ: ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್ ಕೊಡಿ, ಇಲ್ಲದಿದ್ರೆ ಶಾಲೆಗಳ ಮಾನ್ಯತೆ ರದ್ದು – ಸುಪ್ರೀಂ ವಾರ್ನಿಂಗ್

