ಮಡಿಕೇರಿ: ಕೊಡಗಿನಲ್ಲಿ ಘೋಷಿಸಿದ್ದ ರೆಡ್ ಅಲರ್ಟ್ ವಾಪಸ್ ಪಡೆಯಲಾಗಿದೆ. ಆದರೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಮಾಂದಲಪಟ್ಟಿಯನ್ನು 1 ತಿಂಗಳುಗಳ ಕಾಲ ಬಂದ್ ಮಾಡಲಾಗುತ್ತಿದ್ದು, ಪ್ರವಾಸಿಗರು ಇಲ್ಲಿ ತೆರೆಳದಂತೆ ಕೊಡಗು ಡಿಸಿ ಅನೀಸ್ ಕಣ್ಮನಿ ಜಾಯ್ ಸೂಚಿಸಿದ್ದಾರೆ.
ಮಳೆಯಿಂದಾಗಿ ಮಾಂದಲಪಟ್ಟಿ ರಸ್ತೆಯಲ್ಲಿ ಸರಣಿ ಮಣ್ಣು ಕುಸಿತ ಹಿನ್ನೆಲೆ ಜಿಲ್ಲಾಧಿಕಾರಿಗಳು ಈ ಆದೇಶವನ್ನು ಹೊರಡಿಸಿದ್ದಾರೆ. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಮಾಂದಲಪಟ್ಟಿ ಬಂದ್ ಮಾಡಲಾಗುತ್ತಿದೆ. ತಾಂತ್ರಿಕ ಸಮಿತಿ ವರದಿ ಆಧರಿಸಿ ಆಗಸ್ಟ್ 31ರವರೆಗೆ ಮಾಂದಲಪಟ್ಟಿ ಬಂದ್ ಮಾಡಲಾಗುತ್ತದೆ ಎಂದು ಕೊಡಗು ಡಿಸಿ ಆದೇಶಿಸಿದ್ದಾರೆ.
ಕಳೆದ ಬಾರಿ ಮಾಂದಲಪಟ್ಟಿ ರಸ್ತೆಯಲ್ಲಿ ಗುಡ್ಡ ಕುಸಿದಿತ್ತು. ಅದರಂತೆ ಈ ಬಾರಿ ಕೂಡ ಅದೇ ಸ್ಥಳಗಳಲ್ಲಿ ಗುಡ್ಡಗಳು ಕುಸಿಯುತ್ತಿವೆ. ಈ ಮಾರ್ಗದಲ್ಲಿ ಗುಡ್ಡ ಕುಸಿದು ಮಣ್ಣು ಬಿದ್ದು, ರಸ್ತೆ ಬಂದ್ ಆಗುವ ಸಾಧ್ಯತೆ ಕೂಡ ಹೆಚ್ಚಿದೆ. ಹೀಗಾಗಿ ಮಾಂದಲಪಟ್ಟಿ ತಾಣಕ್ಕೆ ಪ್ರವಾಸಿಗರು ತೆರಳದಂತೆ ಡಿಸಿ ಸೂಚನೆ ನೀಡಿದ್ದಾರೆ.
ಕೊಡಗಿನಲ್ಲಿ ಮಳೆ ನಿಂತರೂ ಅದರಿಂದ ಆಗುತ್ತಿರುವ ಅವಾಂತರಗಳು ಮಾತ್ರ ನಿಲ್ಲುತ್ತಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ತುಂತುರು ಮಳೆಯಾದರೂ ಕೂಡ ಜನ ಆತಂಕ ಪಡುವ ಪರಿಸ್ಥತಿ ಇದೆ.