ಬೆಂಗಳೂರು: ಚಂದನವನದ 80ರ ದಶಕದ ಚೆಂದದ, ಮುದ್ದಾದ ಜೋಡಿ ಮತ್ತೆ ಒಂದಾಗಲಿದೆ. ಅಂದು ಬೆಳ್ಳಿತೆರೆಯಲ್ಲಿ ಮೋಡಿ ಮಾಡಿದ್ದ ಜೋಡಿ ಈಗ ಕಿರುತೆರೆಯಲ್ಲಿ ಕಮಾಲ್ ಮಾಡಲು ಬರುತ್ತಿದ್ದಾರೆ.
35 ವರ್ಷದ ಹಿಂದೆ ಚಂದನವನದ ಬೆಳ್ಳಿತೆರೆಯ ಭಾವ ಶಿಲ್ಪಿ, ಎಸ್.ಆರ್.ಪುಟ್ಟಣ್ಣ ಕಣಗಾಲ್ ನಿರ್ದೇಶನದ ಸೂಪರ್ ಹಿಟ್ ಸಿನಿಮಾ ಮಾನಸ ಸರೋವರ ಮಗದೊಮ್ಮೆ ಬರಲಿದೆ. ಆದ್ರೆ ಸ್ಮಾಲ್ ಚೈಂಜ್ ಏನು ಅಂದ್ರೆ ಬಿಗ್ ಸ್ಕ್ರೀನ್ ನಿಂದ ಸ್ಮಾಲ್ ಸ್ಕ್ರೀನ್ಗೆ ಮಾನಸ ಸರೋವರ ಹರಿಯಲಿದೆ.
ಸ್ಯಾಂಡಲ್ವುಡ್ ಮಾಸ್ ಲೀಡರ್, ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದು, ಫಸ್ಟ್ ಟೈಮ್ ಕಿರುತೆರೆಯಲ್ಲಿ ಧಾರಾವಾಹಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ತಮ್ಮದೆಯಾದ ಶ್ರೀ ಮುತ್ತು ಸಿನಿ ಸರ್ವಿಸ್ ಬ್ಯಾನರ್ ಅಡಿ ಧಾರಾವಾಹಿ ನಿರ್ಮಾಣಕ್ಕೆ ಸಜ್ಜಾಗಿದ್ದಾರೆ.
ಈ ಧಾರಾವಾಹಿಯ ಹೆಸರು `ಮಾನಸ ಸರೋವರ’. ಇಂದು ಬೆಂಗಳೂರಿನ ಕಂಠಿರವ ಸ್ಟೂಡಿಯೋದಲ್ಲಿ ಈ ಧಾರಾಹಿಯ ಮುಹೂರ್ತ ನೆರವೇರಿತು. ದೊಡ್ಮನೆಯ ಮಕ್ಕಳಾದ ಶಿವರಾಜ್ಕಮಾರ್, ಪುನೀತ್ ರಾಜ್ಕುಮಾರ್ ಹಾಗೂ ವಿನಯ್ ರಾಜ್ಕುಮಾರ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಮುಹೂರ್ತಕ್ಕೆ ಸಾಕ್ಷಿಯಾದರು. ಸಿರಿಯಲ್ ಕಥೆ ಮಾನಸ ಸರೋವರದ ಮುಂದುವರೆದ ಭಾಗವಾಗಿದೆ. ಪ್ರಣಯ ರಾಜ ಶ್ರೀನಾಥ್, ಪದ್ಮವಸಂತಿ ಹಾಗೂ ರಾಮಕೃಷ್ಣ ನಟರು ಈ ಧಾರಾವಾಹಿಯಲ್ಲಿ ಮತ್ತೊಮ್ಮೆ ಜೊತೆಯಾಗಿ ಬಣ್ಣಹಚ್ಚುತ್ತಿದ್ದಾರೆ. ಶಿವಣ್ಣರ ದ್ವಿತಿಯ ಪುತ್ರಿ ನಿವೇದಿತಾ ಮಾನಸ ಸರೋವರಕ್ಕೆ ನಿರ್ಮಾಪಕಿಯಾಗಿದ್ದಾರೆ.