ವಿಜಯಪುರ: ಸಿನಿಮೀಯ ರೀತಿಯಲ್ಲಿ ಬ್ಯಾಂಕ್ ದರೋಡೆ ಮಾಡಿ, 10.5 ಕೋಟಿ ರೂ. ಮೌಲ್ಯದ ಚಿನ್ನವನ್ನು ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ವಿಜಯಪುರ (Vijayapura) ಪೊಲೀಸರು ಬಂಧಿಸಿದ್ದಾರೆ.
ಹೌದು, ಮೇ 25ರಂದು ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಣಣದ ಕೆನರಾ ಬ್ಯಾಂಕ್ನಲ್ಲಿ ದರೋಡೆ ನಡೆದಿತ್ತು. ಸ್ವತಃ ಬ್ಯಾಂಕ್ ಮ್ಯಾನೇಜರ್ ದರೋಡೆಗೆ ಸ್ಕೆಚ್ ಹಾಕಿದ್ದ. ಧಾರಾಕಾರ ಮಳೆಯಲ್ಲೇ ಸಿನಿಮೀಯ ಶೈಲಿಯಲ್ಲಿ ಬಂದು 58 ಕೆ.ಜಿ 975.94 ಗ್ರಾಂ ಚಿನ್ನಾಭರಣ ಹಾಗೂ 5.20 ಲಕ್ಷ ರೂ. ನಗದು ಕದ್ದು ಪರಾರಿಯಾಗಿದ್ದರು. ಇದರಿಂದ ಬ್ಯಾಂಕ್ನ ಗ್ರಾಹಕರು ಕಂಗಾಲಾಗಿದ್ದರು. ಆರೋಪಿಗಳನ್ನು ಪತ್ತೆಹಚ್ಚುವುದೇ ಜಿಲ್ಲಾ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು.ಇದನ್ನೂ ಓದಿ: ಐತಿಹಾಸಿಕ ಕ್ಷಣಕ್ಕೆ ಭಾರತ ಸಾಕ್ಷಿ – ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸೇರಿದ ಮೊದಲ ಭಾರತೀಯ ಶುಕ್ಲಾ
ಆರೋಪಿಗಳ ಪತ್ತೆಗಾಗಿ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ 8 ತಂಡಗಳನ್ನ ರಚಿಸಿದ್ದರು. ಪ್ರಕರಣವನ್ನು ಎಲ್ಲ ಆಯಾಮಗಳಲ್ಲಿ ತನಿಖೆ ಮಾಡಿ, ಒಂದೇ ತಿಂಗಳಲ್ಲಿ ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ವಿಜಯಕುಮಾರ್ (41), ಚಂದ್ರಶೇಖರ್ (38), ಸುನೀಲ್ (40) ಬಂಧಿತ ಆರೋಪಿಗಳು. ಜೊತೆಗೆ 10.5 ಲಕ್ಷ ರೂ. ಮೌಲ್ಯದ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ ಎರಡು ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸದ್ಯ ಪ್ರಕರಣ ಭೇದಿಸಿದ್ದಕ್ಕೆ ಬ್ಯಾಂಕ್ನಲ್ಲಿ ಚಿನ್ನಾಭರಣ ಇಟ್ಟಿದ್ದ ಗ್ರಾಹಕರು ಕೊಂಚ ರಿಲ್ಯಾಕ್ಸ್ ಆಗಿದ್ದಾರೆ.
ಘಟನೆ ಏನು?
ಆರೋಪಿ ವಿಜಯಕುಮಾರ ಹುಬ್ಬಳ್ಳಿಯ ಕೋಠಾರಿ ನಗರದ ಕೆನರಾ ಬ್ಯಾಂಕ್ನಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಇನ್ನೋರ್ವ ಆರೋಪಿ ಚಂದ್ರಶೇಖರ ಹುಬ್ಬಳ್ಳಿಯಲ್ಲಿ ಖಾಸಗಿ ಉದ್ಯೋಗಿಯಾಗಿದ್ದ. ಮೂರನೇ ಆರೋಪಿ ಸುನೀಲ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಮೇ 25ರಂದು ಬ್ಯಾಂಕ್ನ ಕಿಟಕಿಯ ಸರಳುಗಳನ್ನು ಕಟ್ ಮಾಡಿ, ಒಳನುಗ್ಗಿದ್ದರು. ಜೊತೆಗೆ ಪೊಲೀಸರ ದಿಕ್ಕು ತಪ್ಪಿಸಲು ಗೊಂಬೆ ಇಟ್ಟು ವಾಮಾಚಾರ ಮಾಡಿದ್ದರು.ಇದನ್ನೂ ಓದಿ: ಡಾಕಿಂಗ್ ನಂತರದ ಪ್ರಕ್ರಿಯೆ ಶುರು – ಸಂಜೆ 6 ಗಂಟೆ ವೇಳೆಗೆ ಬಾಹ್ಯಾಕಾಶ ನಿಲ್ದಾಣದೊಳಕ್ಕೆ ಅಧಿಕೃತ ಎಂಟ್ರಿ