ಬೆಂಗಳೂರು: ಹೆಂಡತಿ, ಮಕ್ಕಳೊಂದಿಗೆ ಊರಿಗೆ ಹೋಗುತ್ತಿದ್ದಾಗ ಹೃದಯಾಘಾತವಾಗಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ನಡೆದೆ.
ಮನೋಜ್ ಕುಮಾರ್(33) ಹೃದಯಾಘಾತದಿಂದ ಸಾವನ್ನಪ್ಪಿರುವ ವ್ಯಕ್ತಿ. ಮನೋಜ್ ಕುಮಾರ್ ಉತ್ತರ ಪ್ರದೇಶ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಪೇಂಟರ್ ಕೆಲಸ ಮಾಡಿಕೊಂಡಿದ್ದರು. ಬೆಂಗಳೂರಿಗೆ ಬಂದು ಆರು ತಿಂಗಳಾದರೂ ಊರಿಗೆ ಹೋಗಿರಲಿಲ್ಲ. ಇದೀಗ ಊರಿನಲ್ಲಿ ದೇವರ ಪೂಜೆ ಇದ್ದ ಕಾರಣ ಹೆಂಡತಿ ಮೂವರು ಮಕ್ಕಳೊಂದಿಗೆ ಉತ್ತರ ಪ್ರದೇಶಕ್ಕೆ ಹೋಗಲು ಬೆಂಗಳೂರಿನ ಯಶವಂತಪುರ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದರು.
ಗೋರಖ್ಪುರ ಎಕ್ಸ್ಪ್ರೆಸ್ ರೈಲಿಗೆ ಹೋಗಲು ಟಿಕೇಟ್ ಸಹ ಖರೀದಿಸಿದ್ದರು. ರೈಲು ಬರುವುದು ತಡವಾದ ಕಾರಣ ಹೆಂಡತಿ ಮಕ್ಕಳೊಂದಿಗೆ ರೈಲಿಗಾಗಿ ಪ್ಲಾಟ್ ಫ್ಲಾರ್ಮ್ ನಲ್ಲಿ ಕಾಯುತ್ತಿದ್ದಾಗ ಮನೋಜ್ ಕುಮಾರ್ ಅವರಿಗೆ ಹೃದಯಘಾತವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ನಡೆಯುತ್ತಿದ್ದಂತೆ ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಮೃತದೇಹವನ್ನು ರಾಮಯ್ಯ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.