ಬೆಂಗಳೂರು: ಬೇಸಿಗೆ ಶುರುವಾಗುತ್ತಿದ್ದಂತೆಯೇ ಸಿಲಿಕಾನ್ ಸಿಟಿಯಲ್ಲಿ ನೀರಿನ ಸಮಸ್ಯೆ (Bengaluru Water Crisis) ಕಾಡುತ್ತಿದೆ. ಇದೀಗ ಈ ಸಮಸ್ಯೆ ಜೊತೆ ಇನ್ನೊಂದು ಸಮಸ್ಯೆ ಯುವಕರನ್ನು ಕಾಡುತ್ತಿದೆ.
ಹೌದು. ಬೆಂಗಳೂರಿನಲ್ಲಿ ನೀರಿನ ಸಮಸ್ಯೆಯಿಂದ ಜನ ಬಳಲುತ್ತಿದ್ದರೆ, ಇತ್ತ ಈ ಸಮಸ್ಯೆಯಿಂದಾಗಿ ವಯಸ್ಸಿಗೆ ಬಂದ ಯುವಕರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲವಂತೆ. ಹೀಗಂತ ನರೇಂದ್ರ ಎಂಬವರು ತನ್ನ ಗೆಳೆಯನ ಪರಿಸ್ಥಿತಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾರೆ.
ಈ ಸಂಬಂಧ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ವ್ಯಕ್ತಿ, ಬೆಂಗಳೂರಿನಲ್ಲಿ ನೀರಿನ ಸಮಸ್ಯೆಯಿಂದಾಗಿ ಐಟಿ ಉದ್ಯೋಗದಲ್ಲಿ ಇರುವ ತನ್ನ ಗೆಳೆಯನಿಗೆ ಹೆಣ್ಣು ಸಿಗುತ್ತಿಲ್ಲ. ಹೀಗಾಗಿ ರಾಹುಲ್ ಗಾಂಧಿಯವರೇ ದಯವಿಟ್ಟು ನೀರಿನ ಸಮಸ್ಯೆ ಬಗೆಹರಿಸಿ. ಈ ಮೂಲಕ ಗೆಳೆಯನಿಗೆ ಮದುವೆಯಾಗಲು ಹುಡುಗಿ ಸಿಗುವಂತೆ ಮಾಡಿ ಎಂದು ರಾಗಾಗೆ ಟ್ಯಾಗ್ ಮಾಡಿ ಮನವಿ ಮಾಡಿಕೊಂಡಿದ್ದಾರೆ.
ಎಕ್ಸ್ನಲ್ಲಿ ಬರೆದುಕೊಂಡಿದ್ದೇನು..?: ರಾಹುಲ್ ಗಾಂಧಿಯವರೇ ದಯವಿಟ್ಟು ಗಮನಿಸಿ, ಆದ್ಯತೆಯ ಮೇರೆಗೆ ಬೆಂಗಳೂರಿನ ನೀರಿನ ಸಮಸ್ಯೆ ಬಗೆಹರಿಸಿ. ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿರುವ ಸ್ನೇಹಿತನೊಬ್ಬ ತನ್ನ ಸದ್ಯದ ಪರಿಸ್ಥಿತಿಯನ್ನು ನನ್ನೊಂದಿಗೆ ಹಂಚಿಕೊಂಡಿದ್ದಾನೆ. ನನ್ನ ಗೆಳೆಯ ಮದುವೆಯಾಗಲು ಸಿದ್ಧವಿದ್ದು, ವಧುವಿನ ಹುಡುಕಾಟದಲ್ಲಿದ್ದಾರೆ. ಆದರೆ ಎಷ್ಟೇ ಹುಡುಕಿದರೂ ಅವರಿಗೆ ವಧು ಸಿಗುತ್ತಿಲ್ಲ. ನೀರಿನ ಸಮಸ್ಯೆಯಿಂದಾಗಿ ಹುಡುಗಿಯರು ಮದುವೆಯಾಗಲು ಒಪ್ಪಿಗೆ ಸೂಚಿಸುತ್ತಿಲ್ಲ ಎಂದು ನನ್ನ ಮುಂದೆ ಬೇಸರ ವ್ಯಕ್ತಪಡಿಸಿದ್ದಾನೆ. ಇದನ್ನೂ ಓದಿ: ಜಲಮಂಡಳಿಯಿಂದ ನೀರಿನ ಕೊರತೆಯಿರುವ ಪ್ರದೇಶಗಳ ಪಟ್ಟಿ ರಿಲೀಸ್
ಒಟ್ಟಿನಲ್ಲಿ ಈ ಬಾರಿ ಸಿಲಿಕಾನ್ ಸಿಟಿ ಮಂದಿಗೆ ನೀರಿನ ಬಿಸಿ ತಾಗಿದೆ. ಕಳೆದ ಒಂದು ತಿಂಗಳಿಂದ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಳ್ತಾ ಇದೆ. ಹನಿ ಹನಿ ನೀರಿಗೂ ಜನ ಪರದಾಡ್ತಿದ್ದಾರೆ. ನೀರು ಪೂರೈಕೆ ಮಾಡೋದ್ರಲ್ಲಿ ಸರ್ಕಾರ ಮತ್ತು ಜಲಮಂಡಳಿ ಸತತ ಪ್ರಯತ್ನ ಮಾಡ್ತಾ ಇದೆ. ಈ ಮಧ್ಯೆ ಜಲಮಂಡಳಿ ಬೆಂಗಳೂರಿನಲ್ಲಿ ನೀರಿನ ಕೊರತೆ ಇರುವ ಪ್ರದೇಶಗಳ ಸರ್ವೆ ಮಾಡಿದೆ. ಪ್ರಮುಖವಾಗಿ 257 ಏರಿಯಾಗಳಲ್ಲಿ ನೀರಿನ ಕೊರತೆ ಇರೋದು ಗೊತ್ತಾಗಿದೆ. ಬೋರ್ ವೆಲ್ಗಳು ಬತ್ತಿ ಹೋಗಿದ್ದು, ಅಂತರ್ಜಲದ ಮಟ್ಟ ಕುಸಿದಿರೋದು ನೀರಿನ ಸಮಸ್ಯೆಗೆ ಕಾರಣ ಎಂಬ ಮಾಹಿತಿ ಲಭ್ಯವಾಗಿದೆ.