ಮಂಡ್ಯ: ಬೆಂಗಳೂರಿನ ಜಾಲಹಳ್ಳಿ ಕ್ರಾಸ್ನಲ್ಲಿರುವ ಎಟಿಎಂಗೆ ಸಿಬ್ಬಂದಿ ಹಣ ತುಂಬುವಾಗ ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಹಣ ದೋಚಿ ಪರಾರಿಯಾಗಿದ್ದ ಖದೀಮನೊಬ್ಬನನ್ನು ಮಂಡ್ಯ ಜಿಲ್ಲೆ, ಮಳವಳ್ಳಿ ಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ನಿತಿನ್ ಕುಮಾರ್ ಎಂಬವನೇ ಬಂಧಿತ ಆರೋಪಿ. ಸೋಮವಾರದಂದು ಮೂವರು ಯುವಕರ ಗುಂಪು ಎಣ್ಣೆ ಕುಡಿದು ಮಳವಳ್ಳಿ ಪಟ್ಟಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿತ್ತು. ಇದನ್ನು ಗಮನಿಸಿದ ಪೊಲೀಸರು ಅವರನ್ನು ಹಿಂಬಾಲಿಸಿದಾಗ ತಮ್ಮ ಬಳಿಯಿದ್ದ ಬ್ಯಾಗ್ ತೆಗೆದುಕೊಂಡು ಬಟ್ಟೆ ಅಂಗಡಿಯೊಂದರ ಒಳಗೆ ನುಗ್ಗಿ ತಪ್ಪಿಸಿಕೊಳ್ಳಲು ಯತ್ನಿಸಿದ್ರು.
ಆದ್ರೆ ಅವರನ್ನು ಬೆನ್ನತ್ತಿ ಹಿಡಿದ ಪೊಲೀಸರು, ಅವರ ಬಳಿಯಿದ್ದ ಬ್ಯಾಗ್ ಪರೀಕ್ಷಿಸಿದಾಗ ಬ್ಯಾಗ್ ತುಂಬಾ ಎರಡು ಸಾವಿರ, ಐನೂರು, ನೂರು ರೂಪಾಯಿ ಮುಖಬೆಲೆಯ ನೋಟುಗಳಿರುವುದು ಪತ್ತೆಯಾಗಿತ್ತು.
ಮೂವರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಎಟಿಎಂಗೆ ತುಂಬಲು ಹೋಗುತ್ತಿದ್ದ ಹಣ ದೋಚಿದ ಪ್ರಕರಣ ಬೆಳಕಿಗೆ ಬಂದಿದೆ. ಮೂಲತಃ ಮಳವಳ್ಳಿಯವನಾದ ನಿತಿನ್ಕುಮಾರ್ ಬೆಂಗಳೂರಿನಲ್ಲೇ ವಾಸವಿದ್ದ. ಸೋಮವಾರ ಬೆಳಗ್ಗೆ ಹಣ ದೋಚಿದವನು ನೇರವಾಗಿ ಮಳವಳ್ಳಿಗೆ ಬಂದಿದ್ದ.
ಇದರ ಅರಿವಿರದ ಇನ್ನಿಬ್ಬರು ಯುವಕರು ಗೆಳೆಯ ನಿತಿನ್ಕುಮಾರ್ ಜೊತೆ ಸೇರಿಕೊಂಡಿದ್ರು. ಆದ್ರೆ ಇದೀಗ ಪೊಲೀಸರ ಚಾಣಾಕ್ಷತೆಯಿಂದ ಆರೋಪಿ ನಿತಿನ್ಕುಮಾರ್ 15 ಲಕ್ಷ ಹಣದೊಂದಿಗೆ ಸಿಕ್ಕಿಬಿದ್ದಿದ್ದಾನೆ. ನಿತಿನ್ ಕುಮಾರ್ ಜೊತೆ ಹಣ ದೋಚಿದ್ದ ಮತ್ತೊಬ್ಬ ಆರೋಪಿ ಮಾರುತಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.
ಎಟಿಎಂ ಗೆ ಹಣ ತುಂಬುವ ವೇಳೆ 18 ಲಕ್ಷ ರೂ. ಕಸಿದು ಪರಾರಿಯಾದ ಘಟನೆ ನಗರದ ಜಾಲಹಳ್ಳಿ ಕ್ರಾಸ್ ಬಳಿ ಸೋಮವಾರದಂದು ನಡೆದಿತ್ತು. ಬೆಳಗ್ಗೆ 6 ಗಂಟೆ ಸುಮಾರಿಗೆ ಐಸಿಐಸಿಐ ಬ್ಯಾಂಕ್ ಎಟಿಎಂಗೆ ಹಣ ತುಂಬಿಸುವ ವೇಳೆ 220 ಪಲ್ಸರ್ ಬೈಕ್ನಲ್ಲಿ ಹೆಲ್ಮಟ್ ಧರಿಸಿ ಬಂದಿದ್ದ ದುಷ್ರ್ಕಮಿಗಳು ಸೆಕ್ಯೂರ್ ವೆಲ್ ಏಜೆನ್ಸಿಯ ಮೂವರು ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದರು. ಪ್ರತಿರೋಧ ಒಡಿದ್ದಕ್ಕೆ ಕಸ್ಟೋಡಿಯನ್ ಮೋಹನ್ ಅವರಿಗೆ ಚಾಕುವಿನಿಂದ ಇರಿದ ದುಷ್ರ್ಕಮಿಗಳು 18 ಲಕ್ಷ ರೂ. ಕಸಿದು ಪರಾರಿಯಾಗಿದ್ದರು.
ಮೋಹನ್, ಸಾಗರ್ ಹಾಗೂ ಪ್ರಸನ್ನ ಸೆಕ್ಯೂರ್ ವೆಲ್ ಏಜ್ಸೇನಿಯ ಸಿಬ್ಬಂದಿಗಳು. ಎಟಿಎಂಗೆ ಹಣ ತುಂಬಲು ಒಟ್ಟು 1 ಕೋಟಿ, 25 ಲಕ್ಷ ರೂ. ಹಣ ತಂದಿದ್ದರು. ದುಷ್ಕರ್ಮಿಗಳು ಅದರಲ್ಲಿ 18 ಲಕ್ಷ, 50 ಸಾವಿರ ರೂ. ಹಣದ ಬ್ಯಾಗ್ ಕಸಿದು ಪರಾರಿಯಾಗಿದ್ದರು. ಈ ಘಟನೆ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.