– ವಿಜಯಪುರದಲ್ಲಿ ಸಿಎಂ ಎಚ್ಡಿಕೆಯನ್ನು ಬೇತಾಳನಂತೆ ಕಾಡಿದ ವ್ಯಕ್ತಿ
– ಹಣ ಕೊಡಿ ಇಲ್ಲವೇ ಬ್ಯಾಂಕಿನಿಂದ ಸಾಲ ಕೊಡಿಸಿ
– ಪ್ರತಿ ಬಾರಿ ಬಂದಾಗಲೂ ಹಣ ಕೊಟ್ಟಿದ್ದೇನೆ ಎಂದ ಸಿಎಂ
ವಿಜಯಪುರ: ಸಿಎಂ ಕುಮಾರಸ್ವಾಮಿ ಅವರನ್ನು ಬಹಳ ದಿನಗಳಿಂದ ಕಾಡುತ್ತಿದ್ದ ವ್ಯಕ್ತಿಯೊಬ್ಬ ವಿಜಯಪುರದಲ್ಲಿ ನಡೆದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲೂ ಗಂಟು ಬಿದ್ದಿದ್ದಾನೆ.
ಜಿಲ್ಲೆಯ ಹಾವಿನಾಳ ಗ್ರಾಮದ ನಿವಾಸಿ ಕಾಶಿನಾಥ್ ಬನಸೋಡೆ ಸಿಎಂ ಗೆ ಬೆನ್ನಿಗೆ ಬಿದ್ದ ಬೇತಾಳನಂತೆ ಕಾಡುತ್ತಿದ್ದಾನೆ. ಹಣ ಕೊಡಿ ಇಲ್ಲವೇ ಬ್ಯಾಂಕ್ನಿಂದ ಸಾಲ ಕೊಡಿಸಿ ಎಂದು ಸಿಎಂ ಅವರನ್ನು ಬಹಳ ದಿನಗಳಿಂದ ಪೀಡಿಸುತ್ತಿದ್ದಾನೆ.
ಹಲವು ಬಾರಿ ಸಿಎಂ ಅವರಿಂದಲೇ ಹಣವನ್ನು ಕೂಡ ಪಡೆದಿದ್ದ ಕಾಶಿನಾಥ್ ಇಂದು ನಡೆದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲೂ ಕಾಶಿನಾಥ್ ಸಿಎಂ ಬಳಿ ಬಂದು ಸಾಲ ಕೊಡಿಸಿ ಎಂದು ಪೀಡಿಸಿದ್ದಾನೆ.
ಅಹವಾಲು ಸ್ವೀಕರಿಸುತ್ತಿದ್ದ ವೇಳೆ ಸಿಎಂ ಹಾಗೂ ಜಿಲ್ಲಾಧಿಕಾರಿ ಕಾಲಿಗೆ ಬಿದ್ದ ಕಾಶಿನಾಥ್, ನಾನೊಬ್ಬ ಅನಾಥ ನನ್ನ ಬಳಿ ಹಣವಿಲ್ಲ, 63 ಸಾವಿರ ರೂ. ಕಬ್ಬಿನ ಹಣ ಹಾಗೂ ಸ್ವಲ್ಪ ಹಣ ಆಸ್ಪತ್ರೆಗೆ ಬೇಕು. ಅದಕ್ಕೆ ನನಗೆ 1 ಲಕ್ಷ ರೂ. ಸಾಲ ಕೊಡಿಸಿ ಅದನ್ನು ಹಾಳುಮಾಡಲ್ಲ ಎಂದು ಕೇಳಿಕೊಂಡಿದ್ದಾರೆ. ಈ ವೇಳೆ ಸಿಎಂ, ಈತ ಕಳ್ಳ ಆಸಾಮಿ, 50 ಬಾರಿ ನನ್ನ ಬಳಿ ಬಂದಿದ್ದಾನೆ. ಪ್ರತಿ ಸಾರಿ ಹಣ ಕೊಟ್ಟು ಕಳುಹಿಸಿದ್ದೇನೆ. ಅಲ್ಲದೆ ಮತ್ತೆ ಈಗ ಬಂದಿದ್ದಾನೆ ಎಂದು ಹೇಳಿದರು.
ಕಾಶಿನಾಥ್ ಬೆನ್ನಿಗೆ ಬಿದ್ದರೆ ಸುಮ್ಮನೆ ಹೋಗೋ ಆಸಾಮಿಯಲ್ಲ. ಹಣ ಕೊಡಿ ಅಂತ ಈ ಹಿಂದೆ ಹಲವರನ್ನು ಕಾಡಿದ್ದಾನೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ. ಕೊನೆಗೆ ಈ ವಿಚಾರದ ಕುರಿತು ನೋಡುತ್ತೇವೆ ಎಂದು ಅಧಿಕಾರಿಗಳು ಕಾಶಿನಾಥ್ ನನ್ನು ಸಮಾಧಾನಪಡಿಸಿ ಸಭೆಯಿಂದ ಕಳುಹಿಸಿಲಾಯಿತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv