ಮಂಡ್ಯ: ಸಾಂಸಾರಿಕ ಜೀವನದಲ್ಲಿ ಜಿಗುಪ್ಸೆ ಹಿನ್ನೆಲೆಯಲ್ಲಿ ಏಳು ಪುಟಗಳ ಡೆತ್ನೋಟ್ ಬರೆದಿಟ್ಟು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಆಲದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮನೋಜ್(30) ಆತ್ಮಹತ್ಯೆಗೆ ಶರಣಾದವರು. ಮನೋಜ್ ಎರಡು ದಿನ ಮುಂಚಿತವಾಗಿಯೇ ಡೆತ್ ನೋಟ್ ಬರೆದಿದ್ದು, ಇಂದು ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ದೇಹದಾನ ಮಾಡುವಂತೆ ಡೆತ್ ನೋಟ್ ನಲ್ಲಿ ನಮೂದಿಸಿದ್ದಾರೆ.
ಘಟನೆ ವಿವರ?: ಮನೋಜ್ ವೈದ್ಯೆಯೊಬ್ಬಳನ್ನು ಪ್ರೀತಿಸುತ್ತಿದ್ದರು. ಆದರೆ ಆಕೆಗೆ ಬೇರೆಯವರ ಜೊತೆ ಮದುವೆಯಾಗುತ್ತದೆ. ಬಳಿಕ ಆಕೆ ಪತಿಯಿಂದ ವಿಚ್ಛೇದನ ಪಡೆದು ಮತ್ತೆ ಮನೋಜ್ ಗೆ ಹತ್ತಿರವಾಗಿ ಬೆಂಗಳೂರಿಗೆ ಕರೆಸಿಕೊಳ್ಳುತ್ತಾಳೆ. ಹೀಗಾಗಿ ಇಬ್ಬರು ಎರಡು ವರ್ಷ ಒಟ್ಟಿಗೆ ಇರುತ್ತಾರೆ. ಇದೇ ಸಮಯದಲ್ಲಿ ತನ್ನನ್ನು ಮದುವೆಯಾಗುವಂತೆ ಮನೋಜ್ ನನ್ನು ಒತ್ತಾಯಿಸುತ್ತಾಳೆ. ಆಗ ಮನೋಜ್ ಮನೆಯಲ್ಲಿ ಒಪ್ಪಿಸಿ ಆಗೋಣ ಎಂದು ನಿಧಾನ ಮಾಡಿದ್ದರು. ಇದರಿಂದ ಬೇಸರಗೊಂಡ ಮಹಿಳೆ ಮನೋಜ್ ಮತ್ತು ಅವರ ಕುಟುಂಬದವರ ವಿರುದ್ಧ ದೂರು ನೀಡಿದ್ದಾಳೆ.
ದೂರು ನಿಡಿದ ಬಳಿಕ ಮನೋಜ್ ಸಂಬಂಧಿಯೊಬ್ಬರು ಬಂದು ಪೊಲೀಸ್ ಜೊತೆ ಮಾತನಾಡಿ ಇಬ್ಬರಿಗೂ ಫೆಬ್ರವರಿಯಲ್ಲಿ ರಿಜಿಸ್ಟರ್ ಮದುವೆ ಮಾಡಿಸಿದ್ದಾರೆ. ಆದರೆ ಮನೋಜ್ ನನಗೆ ತುಂಬಾ ಜವಾಬ್ದಾರಿ ಇದೆ ಸ್ವಲ್ಪ ದಿನ ತಮ್ಮ ಊರಿಗೆ ಹೋಗಿ ಬಂದು ನಂತರ ಆಕೆಯ ಜೊತೆ ಸಾಂಸಾರಿಕ ಜೀವನ ಶುರು ಮಾಡುತ್ತೇನೆ ಎಂದು ಪೊಲೀಸರ ಅನುಮತಿ ಪಡೆದು ತಮ್ಮ ಗ್ರಾಮಕ್ಕೆ ತೆರಳಿದ್ದಾರೆ. ಆದರೆ ಗ್ರಾಮದಿಂದ ಬರುವುದು ತಡವಾಗಿದ್ದರಿಂದ ಪತ್ನಿ ಕರೆ ಮಾಡಿ, ಮನೋಜ್ ಗೆ ಮಾನಸಿಕವಾಗಿ ಹಿಂಸೆ ನೀಡಿದ್ದಾಳೆ. ಅಲ್ಲದೇ ಮತ್ತೆ ಮನೋಜ್ ಕುಟುಂಬದ ವಿರುದ್ಧ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾಳೆ. ಇದರಿಂದ ಭಯಗೊಂಡು ತನ್ನ ಕುಟುಂಬದವರಿಗೆ ತೊಂದರೆಯಾಗಬಾರದೆಂದು ಮನೋಜ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಯ ಬಳಿಕ ತನ್ನ ಬೈಕ್ ಮತ್ತು ಹೃದಯವನ್ನು ಇಂಥವರಿಗೇ ಕೊಡಬೇಕೆಂಬುದರ ಬಗ್ಗೆ 7 ಪುಟಗಳ ಡೆತ್ ನೋಟ್ ನಲ್ಲಿ ವಿವರವಾಗಿ ಬರೆದಿದ್ದಾರೆ.
ತನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ದೇಹವನ್ನು ವೈದ್ಯಕೀಯ ಶಿಕ್ಷಣ ಸಂಸ್ಥೆಗೆ ದಾನ ಮಾಡಿ. ನನ್ನ ಹೆಂಡತಿಯ ತಾಯಿಗೆ ಹೃದಯದ ಸಮಸ್ಯೆಯಿದ್ದು, ಸಾಧ್ಯವಾದರೆ ನನ್ನ ಹೃದಯ ಅಳವಡಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಕೊನೆಗೆ ತಂದೆ-ತಾಯಿ, ಅಕ್ಕ, ತಂಗಿ ಮತ್ತು ಸ್ನೇಹಿತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಕ್ಕೆ ಕ್ಷಮೆ ಕೇಳಿದ್ದಾರೆ.
ಈ ಘಟನೆ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.