ರಾಂಚಿ: ಅನ್ಯ ಧರ್ಮದ ಯುವತಿಯನ್ನ ಪ್ರೀತಿಸಿದ್ದಕ್ಕೆ ಯುವಕನನ್ನು ವಿವಸ್ತ್ರಗೊಳಿಸಿ ಥಳಿಸಿರುವ ಅಮಾನವೀಯ ಘಟನೆ ಜಾಖಂಡ್ನ ಬೊಕಾರೋ ಜಿಲ್ಲೆಯಲ್ಲಿ ನಡೆದಿದೆ.
ಥಳಿತಕ್ಕೊಳಗಾದ ಯುವಕನನ್ನು ಮೊಹಮ್ಮದ್ ಶಕಿರ್ ಎಂದು ಗುರುತಿಸಲಾಗಿದೆ. ಮಂಗಳವಾರದಂದು ಬೊಕಾರೋದ ಕಥಾರಾ ಪ್ರದೇಶದಲ್ಲಿ ಜನರ ಗುಂಪು ಶಕಿರ್ನನ್ನು ಥಳಿಸಿದ ಪರಿಣಾಮ ಅವರಿಗೆ ಗಂಭೀರ ಗಾಯಗಳಾಗಿವೆ.
ಇಲ್ಲಿನ ಪ್ರಾಗ್ಯಾ ಸೆಂಟರ್ನಲ್ಲಿ ಉದ್ಯೋಗಿಯಾಗಿರೋ ಶಕಿರ್ ಯುವತಿಯೊಬ್ಬರ ಜೊತೆ ಕಚೇರಿಯಲ್ಲಿ ಆಕ್ಷೇಪಾರ್ಹ ಸ್ಥಿತಿಯಲ್ಲಿ ಇದ್ದಿದ್ದನ್ನು ಕೆಲವು ಸ್ಥಳೀಯರು ನೋಡಿದ್ರು.
ಕೂಡಲೇ 10ಕ್ಕೂ ಹೆಚ್ಚು ಜನ ಗುಂಪು ಸೇರಿ ಶಕೀರ್ ಅವರನ್ನ ಆಫೀಸ್ನಿಂದ ಹೊರಗೆ ಎಳೆದುಕೊಂಡು ಬಂದಿದ್ದಾರೆ. ನಂತರ ಅವರನ್ನ ವಿವಸ್ತ್ರಗೊಳಿಸಿ ಮಾರ್ಕೆಟ್ ಪ್ರದೇಶದಲ್ಲಿ ಮೆರವಣಿಗೆ ಮಾಡಿದ್ದಾರೆ.
ನಂತರ ಶಕಿರ್ರನ್ನ ಮನಬಂದಂತೆ ಥಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಗುಂಪನ್ನು ನಿಯಂತ್ರಿಸಲು ಹರಸಾಹಸಪಟ್ಟಿದ್ದು, ಶಕಿರ್ರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎಫ್ಐಆರ್ ದಖಲಿಸಿಕೊಂಡಿದ್ದು, ಸ್ಥಳೀಯ ಮಂತು ಯಾದವ್ ಎಂಬವರನ್ನ ಬಂಧಿಸಿದ್ದಾರೆ. ವಿಡಿಯೋ ಆಧಾರದ ಮೇಲೆ ಮತ್ತಷ್ಟು ಜನರನ್ನ ಶೀಘ್ರದಲ್ಲೇ ಬಂಧಿಸುವ ಸಾಧ್ಯತೆಯಿದೆ.
ಘಟನೆ ಬಳಿಕ ಈ ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.