ಮುಂಬೈ: ನಿಧಿಯ ಆಸೆಯಿಂದ ಪತಿಯೊಬ್ಬ ತನ್ನ ಪತ್ನಿಗೆ ಬರೋಬ್ಬರಿ 50 ದಿನಗಳ ಕಾಲ ಸರಿಯಾಗಿ ಊಟ ನೀಡದೆ ಹಿಂಸಿಸುವ ಮೂಲಕ ಅಮಾನುಷವಾಗಿ ನಡೆಸಿಕೊಂಡ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ನೆರೆ ರಾಜ್ಯದ ಚಂದ್ರಾಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಿಧಿಯನ್ನು ಹೇಗೆ ವಶಪಡಿಸಿಕೊಳ್ಳಬೇಕು ಎಂದು ಸ್ವಘೋಷಿತ ದೇವಮಾನವನೊಬ್ಬ ತೋರಿಸಿದ ಆಸೆಗೆ ಪತಿರಾಯ, 50 ದಿನಗಳ ಕಾಲ ಪತ್ನಿಗೆ ಮಿತ ಆಹಾರ ನೀಡಿ ದೈಹಿಕ ಹಾಗೂ ಮಾನಸಿಕವಾಗಿ ಹಿಂಸಿಸಿದ್ದಾನೆ.
2018ರಲ್ಲಿ ಶೆಗಾಂವ್ ಗ್ರಾಮದಲ್ಲಿ ದಂಪತಿ ವಿವಾಹವಾಗಿತ್ತು. ಪತಿ ಹಾಗೂ ಕುಟುಂಬಸ್ಥರಿಗೆ ಸ್ವ-ಘೋಷಿತ ದೇವಮಾನವನೊಬ್ಬ ಗೌಪ್ಯ ನಿಧಿಯೊಂದಿದೆ, ಅದನ್ನ ನೀವು ಪಡೆಯಬಹುದು ಎಂದು ಆಸೆ ತೋರಿಸಿದ್ದನು. ನಿಧಿ ದೊರೆಯಬೇಕೆಂದರೆ ಕೆಲವು ಪೂಜೆಗಳನ್ನು ಮಾಡಬೇಕಾಗುತ್ತದೆ. ಅದಕ್ಕೆ ಮನೆಯಲ್ಲಿದ್ದ ನೂತನ ಸೊಸೆ ಮಿತ ಆಹಾರ ಸೇವನೆ ಮಾಡಿ ಪೂಜೆ ಮಾಡಬೇಕಾಗುತ್ತದೆ ಎಂದು ಷರತ್ತು ವಿಧಿಸಿದ್ದನು. ಈ ಮಾತಿಗೆ ಮರುಳಾದ ಪತಿ ಹಾಗೂ ಆತನ ಕುಟುಂಬಸ್ಥರು ನಿಧಿಯ ಆಸೆಯಿಂದ ಆಮೆಯೊಂದನ್ನು ಸೊಸೆಗೆ ನೀಡಿ, ಪೂಜೆ ಸಲ್ಲಿಸುವಂತೆ ಸದಾ ಹಿಂಸಿಸುತ್ತಿದ್ದರು.
ಪತಿ ಕೂಡ ಆ ವ್ಯಕ್ತಿಯ ಮಾತು ಕೇಳಿ ಪತ್ನಿಗೆ 50 ದಿನಗಳಿಂದ ಸರಿಯಾದ ಆಹಾರ ನೀಡದೆ ಮಾನಸಿಕ ಹಾಗೂ ದೈಹಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದನು. ಅಷ್ಟೇ ಅಲ್ಲದೆ ಪತ್ನಿಯ ಮೊಬೈಲನ್ನು ಕೂಡ ಪತಿ ಕಸಿದು ತನ್ನ ಬಳಿಯೇ ಇಟ್ಟುಕೊಂಡಿದ್ದನು. ಈ ಹಿನ್ನೆಲೆ ಹಲವು ದಿನಗಳು ಕಳೆದರೂ ಮಗಳು ಫೋನ್ ಮಾಡಲಿಲ್ಲ ಎಂದು ಮಹಿಳೆಯ ಪೋಷಕರು ಆತಂಕಕ್ಕೆ ಒಳಗಾಗಿದ್ದರು. ಹೀಗಾಗಿ ಮಗಳ ಮನೆಗೆ ಹೋಗಿ ವಿಚಾರಿಸಿಕೊಂಡು ಬರೋಣ ಎಂದು ಪೋಷಕರು ಹೋದಾಗ ಮಗಳ ಸ್ಥಿತಿ ಏನಾಗಿದೆ ಎನ್ನುವ ಬಗ್ಗೆ ತಿಳಿದಿದೆ. ನಂತರ ಕೂಡಲೇ ಪೋಷಕರು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ.
ನಸುಕಿನ 2.45ರಿಂದ ರಾತ್ರಿವರೆಗೂ ಪತ್ನಿಗೆ ಸದಾ ಪೂಜೆ ಮಾಡುತ್ತಿರುವಂತೆ ಪತಿ ಹಿಂಸೆ ನೀಡುತ್ತಿದ್ದ. ಈ ನಡುವೆ ಏನಾದರೂ ತಪ್ಪಾದರೆ ಕುಟುಂಬಸ್ಥರೆಲ್ಲರೂ ಸೇರಿ ಆಕೆಗೆ ಹೊಡೆದು ಚಿತ್ರಹಿಂಸೆ ನೀಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೆ ಮಾನವ ಬಲಿ ಹಾಗೂ ಅಮಾನವೀಯ ಅಂಧಶ್ರದ್ಧೆಗಳ ನಿರ್ಮೂಲನೆ ಹಾಗೂ ತಡೆ ಕಾಯ್ದೆ ಅನ್ವಯ ಕೂಡ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಾಗಿದೆ.
ಹಾಗೆಯೇ ಮೂಢನಂಬಿಕೆಗಳನ್ನು ಬಂಡವಾಳವಾಗಿ ಮಾಡಿಕೊಂಡು ಜನರಿಗೆ ಮೋಸ ಮಾಡಿದ ಸ್ವ-ಘೋಷಿತ ದೇವಮಾನವನನ್ನು ಕೂಡ ಪೊಲೀಸರು ಬಂಧಿಸಿದ್ದು, ಗುರುವಾರಂದು ಸ್ಥಳೀಯ ಕೋರ್ಟ್ ಗೆ ಹಾಜರುಪಡಿಸಿದ್ದರು. ಸದ್ಯ ಈ ಬಗ್ಗೆ ವಿಚಾರಣೆ ಮುಂದುವರಿದಿದೆ.