ನವದೆಹಲಿ: ತಮ್ಮ ಕಾರಿನ ಮುಂದೆ ವ್ಯಕ್ತಿಯೊಬ್ಬ ಸ್ಕೂಟಿ ನಿಲ್ಲಿಸಿದ್ದಾನೆ ಎಂಬ ಕ್ಷುಲ್ಲಕ ಕಾರಣಕ್ಕೆ ದ್ವಿಚಕ್ರ ವಾಹನದ ಮಾಲೀಕನ ಮೇಲೆ ಯುವಕರು ಗುಂಡಿನ ದಾಳಿ ಮಾಡಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.
ಗುಲ್ಜಾರ್(28) ಜಾವೆದ್(34) ಗುಂಡಿನ ದಾಳಿ ನಡೆಸಿದ ಆರೋಪಿಗಳು. ಸದರ್ ಬಜಾರ್ ಪ್ರದೇಶದ ನಿವಾಸಿಯಾದ ಜುಬೈರ್ ಮೇಲೆ ಯುವಕರು ಗುಂಡು ಹಾರಿಸಿದ್ದಾರೆ. ಭಾನುವಾರ ರಾತ್ರಿ ಜುಬೈರ್ ತನ್ನ ಸ್ನೇಹಿತ ಬಿಲಾಲ್ ಜತೆ ಸ್ಕೂಟಿಯಲ್ಲಿ ಅಜ್ಮೇರ್ ಗೆ ತೆರಳಿದ್ದರು. ಈ ವೇಳೆ ಅದೇ ಸ್ಥಳದಲ್ಲಿದ್ದ ಗುಲ್ಜಾರ್ ಹಾಗೂ ಜಾವೆದ್ ಕುಳಿತ್ತಿದ್ದ ಕಾರಿನ ಮುಂದೆ ಜುಬೈರ್ ತನ್ನ ಸ್ಕೂಟಿಯನ್ನು ನಿಲ್ಲಿಸಿದ್ದಾರೆ.
ಈ ವೇಳೆ ಇಬ್ಬರು ಯುವಕರು ಜುಬೈದ್ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಅಲ್ಲದೆ ಅವರ ನಡುವೆ ಈ ವಿಷಯಕ್ಕೆ ಜಗಳ ಕೂಡ ಆಗಿದೆ. ಇಷ್ಟಕ್ಕೆ ಕೋಪಗೊಂಡ ಗುಲ್ಜಾರ್ ಪಿಸ್ತೂಲಿನಿಂದ ಜುಬೈರ್ ಗೆ ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್ ಗುಂಡು ಜುಬೈರ್ ಕಾಲಿಗೆ ತಗುಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ನಡೆದ ತಕ್ಷಣ ಕಾರಿನ ಸಂಖ್ಯೆಯನ್ನು ಗಮನಿಸಿಕೊಂಡ ಬಿಲಾಲ್ ಪೊಲೀಸರಿಗೆ ದೂರು ನೀಡಿದ್ದು, ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದೆ.
ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ದಾಳಿಗೆ ಬಳಸಿದ್ದ ಪಿಸ್ತೂಲನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv