– ಪ್ರತಿದಿನ ಸಾವಿರಕ್ಕೂ ಹೆಚ್ಚು ಮಂದಿಗೆ ಊಟ
– ಊಟಕ್ಕೆ ಪ್ರತಿನಿತ್ಯ 20,000 ರೂ. ಖರ್ಚು
ಚೆನ್ನೈ: ತಮಿಳುನಾಡಿನ ತಿರುಚಿರಾಪಳ್ಳಿಯ ವ್ಯಕ್ತಿಯೊಬ್ಬರು ಪ್ರತಿದಿನ ಸರ್ಕಾರಿ ಆಸ್ಪತ್ರೆಗೆ ಹೋಗಿ ರೋಗಿಯ ಕುಟುಂಬಸ್ಥರಿಗೆ ಉಚಿತ ಊಟ ನೀಡುತ್ತಿದ್ದಾರೆ.
ರವೀಂದ್ರ ಕುಮಾರ್ ಪ್ರತಿದಿನ ತಿರುಚ್ಚಿಯ ಸರ್ಕಾರಿ ಆಸ್ಪತ್ರೆಗೆ ಬಡರೋಗಿಗಳಿಗೆ ಹಾಗೂ ಅವರ ಕುಟುಂಬಸ್ಥರಿಗೆ ಉಚಿತ ಆಹಾರ ನೀಡುತ್ತಿದ್ದಾರೆ. ಈ ಕೆಲಸವನ್ನು ಅವರು ಸುಮಾರು 29 ವರ್ಷಗಳಿಂದ ಮಾಡುತ್ತಿದ್ದಾರೆ. ವರದಿಗಳ ಪ್ರಕಾರ ಅವರು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ತಲುಪುತ್ತಾರೆ. ಬಳಿಕ ಬೆಳಗ್ಗೆ 7 ಗಂಟೆಯಿಂದ 8 ಗಂಟೆವರೆಗೆ ಬಿಸಿಬಿಸಿ ತಿಂಡಿ ನೀಡುತ್ತಾರೆ. ಮಧ್ಯಾಹ್ನ 1 ಗಂಟೆ ಊಟ ನೀಡುತ್ತಾರೆ. ಸಂಜೆ 7 ಗಂಟೆಯಿಂದ 8 ಗಂಟೆವರೆಗೂ ರಾತ್ರಿಯ ಊಟ ನೀಡುತ್ತಾರೆ. ಇದನ್ನೂ ಓದಿ: ಹಣ್ಣುಗಳನ್ನು ಮಾರಾಟ ಮಾಡಿ 200 ಬಡ ಜನರಿಗೆ ಊಟ ನೀಡ್ತಿರೋ ವ್ಯಕ್ತಿ
1990ರಲ್ಲಿ ರವೀಂದ್ರ ಅವರ ತಂದೆ ವಿ. ಗೋವಿಂದರಾಜು ಅವರು ಈ ಕೆಲಸವನ್ನು ಶುರು ಮಾಡಿದ್ದರು. ನನ್ನ ತಂದೆ ಯಾವಾಗಲೂ ಸಮಾಜ ಸೇವೆ ಮಾಡಬೇಕು ಎಂದುಕೊಳ್ಳುತ್ತಿದ್ದರು. ಅವರು ತಿರುಚ್ಚಿಯ ಸರ್ಕಾರಿ ಆಸ್ಪತ್ರೆಗೆ ತಲುಪಿದಾಗ ಬಡ ರೋಗಿಗಳನ್ನು ಹಾಗೂ ಅವರ ಕುಟುಂಬದವರನ್ನು ನೋಡಿ ತುಂಬಾ ದುಃಖ ಪಡುತ್ತಿದ್ದರು. ಆಗ ಅವರು ಜನರಿಗೆ ಕೇವಲ ಬಿಸಿ ನೀರು ನೀಡಲು ಶುರು ಮಾಡಿದ್ದರು. ಬಳಿಕ ಗಂಜಿ ನೀಡಲು ಪ್ರಾರಂಭಿಸಿದ್ದರು. ಇದನ್ನೂ ಓದಿ: ಕಾಲೇಜಿಗೆ ಹೋಗಿ ಕನಸು ನನಸು ಮಾಡಿಕೊಳ್ಳಲು ಕ್ಯಾಬ್ ಚಲಾಯಿಸುತ್ತಿದ್ದಾಳೆ 19ರ ಯುವತಿ
ರವೀಂದ್ರ ಪ್ರತಿದಿನ ಸಾವಿರಕ್ಕೂ ಹೆಚ್ಚು ಮಂದಿಗೆ ಊಟ ನೀಡುತ್ತಾರೆ. ರವೀಂದ್ರ ಹಾಗೂ ಅವರ ಪತ್ನಿ ಮನೆಯಲ್ಲಿಯೇ ಊಟ ತಯಾರಿಸುತ್ತಾರೆ. ಪ್ರತಿದಿನ ಮುಂಜಾನೆ 3.30ಕ್ಕೆ ಎದ್ದು ಅಡುಗೆ ಕೆಲಸವನ್ನು ಶುರು ಮಾಡುತ್ತಾರೆ. ಬೆಳಗ್ಗಿನ ತಿಂಡಿಗಾಗಿ ಗಂಜಿ ಅಥವಾ ಪೊಂಗಲ್ ನೀಡುತ್ತಾರೆ. ಮಧ್ಯಾಹ್ನ ಅನ್ನದ ಜೊತೆ ಸಾಂಬಾರ್, ರಸಂ ಹಾಗೂ ಮೊಸರು ನೀಡುತ್ತಾರೆ. ಬೆಳಗ್ಗಿನ ತಿಂಡಿ ರವೀಂದ್ರಕುಮಾರ್ ಅವರು ತಯಾರಿಸಿದರೆ ಅವರ ಪತ್ನಿ ಮಧ್ಯಾಹ್ನದ ಹಾಗೂ ರಾತ್ರಿಯ ಊಟವನ್ನು ತಯಾರಿಸುತ್ತಾರೆ. ಇದನ್ನೂ ಓದಿ: ಪರೀಕ್ಷೆ ಬರೆಯಲು ಹೋದ ತಾಯಂದಿರು – ಮಕ್ಳನ್ನು ನೋಡ್ಕೊಂಡ ಪೇದೆಗಳಿಗೆ ಮೆಚ್ಚುಗೆ
ಈ ಕೆಲಸಕ್ಕಾಗಿ ರವೀಂದ್ರ ಆಹಾರ ಸುರಕ್ಷತಾ ಇಲಾಖೆಯಿಂದ ಅನುಮತಿ ಕೂಡ ಪಡೆದಿದ್ದಾರೆ. ಅವರ ಜೊತೆ ಸ್ವಯಂ ಸೇವಕರಿದ್ದು, ಅಡುಗೆ ಮಾಡುವುದಕ್ಕೆ ಸಹಾಯ ಮಾಡುತ್ತಾರೆ. ರವೀಂದ್ರ ಅವರ ಟ್ರಸ್ಟ್ ಇದ್ದು, ಹಲವು ಮಂದಿ ಧನಸಹಾಯ ಮಾಡುತ್ತಾರೆ. ಪ್ರತಿದಿನ ಜನರಿಗೆ ಊಟ ಹಾಕಲು 20 ಸಾವಿರ ರೂ. ಖರ್ಚು ಆಗುತ್ತಿದೆ. ರವೀಂದ್ರ ಸ್ಟೀಲ್ ಪ್ಲೇಟಿನಲ್ಲಿ ಊಟ ನೀಡುತ್ತಿದ್ದು, ಅದನ್ನು ಸೇವಿಸಿದ ಬಳಿಕ ಜನರೇ ತೊಳೆಯಬೇಕು. ಊಟವನ್ನು ಮನೆಗೆ ತೆಗೆದುಕೊಂಡು ಹೋಗಬೇಕು ಎನ್ನುವವರು ಅವರೇ ಪಾತ್ರೆಗಳನ್ನು ತರಬೇಕು. ಇದನ್ನೂ ಓದಿ: ಗಂಗೆ ಮಲೀನವಾಗಬಾರದೆಂದು ಪ್ರತಿದಿನ ಕಸ ಎತ್ತುತ್ತಿರುವ ಮೀನುಗಾರ
ನನ್ನ ಪತಿ ಒಂದು ವಾರ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ರವೀಂದ್ರ ಅವರ ಊಟ ನಮ್ಮ ಪಾಲಿಗೆ ಆಶೀರ್ವಾದ. ನಾನು ಈ ಊಟವನ್ನು ಮಾಡುತ್ತೇನೆ ಹಾಗೂ ನನ್ನ ಪತಿಗೂ ನೀಡುತ್ತೇನೆ ಎಂದು ರೋಗಿಯ ಪತ್ನಿ ಪ್ರೇಮ ತಿಳಿಸಿದ್ದಾರೆ. ಇನ್ನು ರವೀಂದ್ರ ಅವರು ಪ್ರತಿಕ್ರಿಯಿಸಿ, ಹಸಿದಿರುವ ವ್ಯಕ್ತಿಗೆ ಊಟ ನೀಡುವುದರಿಂದ ಸಿಗುವ ನೆಮ್ಮದಿ ಬೇರೆ ಕೆಲಸದಿಂದ ಸಿಗುವುದಿಲ್ಲ. ನಾನು ನನ್ನ ತಂದೆ ತೋರಿದ ದಾರಿಯಲ್ಲಿ ನಡೆಯುತ್ತಿದ್ದೇನೆ. ಜನರು ಊಟ ಮಾಡುವಾಗ ನನಗೆ ಅವರ ಕಣ್ಣಿನಲ್ಲಿ ದೇವರು ಕಾಣಿಸುತ್ತಾನೆ ಎಂದು ಹೇಳಿದ್ದಾರೆ.