ಹೈದರಾಬಾದ್: ಆಂಧ್ರ ಪ್ರದೇಶದ ನೇಕಾರರೊಬ್ಬರು ತಮ್ಮ ಮನೆಯನ್ನೇ ಮಾರಾಟ ಮಾಡಿ ತ್ರಿವರ್ಣ ಧ್ವಜವನ್ನು ನೇಯುವ ಮೂಲಕ ಭಾರತ ದೇಶದ ಮೇಲಿನ ಅಭಿಮಾನವನ್ನು ಮೆರೆದಿದ್ದಾರೆ.
ಆರ್. ಸತ್ಯನಾರಾಯಣ ತ್ರಿವರ್ಣ ಧ್ವಜವನ್ನು ನೇಯಲು ಮನೆ ಮಾರಿದ್ದಾರೆ. ಇವರು ನೇಕಾರ ವೃತ್ತಿಯನ್ನು ಮಾಡುತ್ತಿದ್ದು, ತಾವೂ ಯಾವುದೇ ಹೊಲಿಗೆ ಇಲ್ಲದ ತ್ರಿವರ್ಣ ಧ್ವಜ ನೇಯಬೇಕು ಎಂದು ಕನಸು ಕಂಡಿದ್ದರು. ಇದಕ್ಕಾಗಿ ಅವರಿಗೆ 6.5 ಲಕ್ಷ ರೂಪಾಯಿ ಹಣ ಬೇಕಾಗಿತ್ತು. ಹೀಗಾಗಿ ತಮ್ಮ ಸ್ವಂತ ಮನೆಯನ್ನೇ ಮಾರಾಟ ಮಾಡಿ ತಮ್ಮ ಕನಸು ನನಸಾಗಿಸಿಕೊಳ್ಳುವ ಮೂಲಕ ದೇಶ ಪ್ರೇಮ ಮೆರೆದಿದ್ದಾರೆ.
8 ಅಡಿ ಎತ್ತರ ಮತ್ತು 12 ಅಡಿ ಅಗಲದ ಈ ತ್ರಿವರ್ಣ ಧ್ವಜವನ್ನು ಯಾವುದೇ ಹೊಲಿಗೆ ಹಾಕದೇ ತಯಾರಿಸಲಾಗಿದೆ. ಸಾಮಾನ್ಯವಾಗಿ ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಬಟ್ಟೆಯನ್ನು ಪ್ರತ್ಯೇಕವಾಗಿ ಸಿದ್ಧಪಡಿಸಿ ನಂತರ ಧ್ವಜವನ್ನು ನೇಯುತ್ತಾರೆ. ಆದರೆ ಇವರು ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಫ್ಲಾಗ್ ಹೊಲಿಯಲು ನಾನು ಯಾವುದೇ ಹೊಲಿಗೆಯನ್ನು ಹಾಕಿಲ್ಲ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ತಾವು ನೇಯ್ದಿರುವ ಧ್ವಜವನ್ನು ಕೆಂಪು ಕೋಟೆಯ ಮೇಲೆ ಹಾರಿಸುವ ಕನಸಿದೆ ಎಂದು ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶಾಖಪಟ್ಟಣಂಗೆ ಭೇಟಿ ನೀಡಿದ್ದರು. ಈ ವೇಳೆ ಸತ್ಯನಾರಾಯಣ ಅವರು ತಾವು ನೇಯ್ದಿರುವ ತ್ರಿವರ್ಣ ಧ್ವಜವನ್ನು ಮೋದಿ ಅವರಿಗೆ ಕೊಟ್ಟಿದ್ದಾರೆ. ಆದರೆ ಈ ಸಂದರ್ಭದಲ್ಲಿ ಧ್ವಜದ ವಿಶಿಷ್ಟತೆ ಬಗ್ಗೆ ತಿಳಿಸಲು ಅವಕಾಶ ಸಿಕ್ಕಿರಲಿಲ್ಲ.
ಈ ಧ್ವಜವನ್ನು ಸಿದ್ಧಪಡಿಸಲು ಸತತ ನಾಲ್ಕು ವರ್ಷ ಶ್ರಮಪಟ್ಟಿದ್ದಾರೆ. ಜೊತೆಗೆ ತಮಗೆ ಪೂರ್ವಜರಿಂದ ಬಳುವಳಿಯಾಗಿ ಬಂದಿದ್ದ ಮನೆಯನ್ನು ಮಾರಾಟ ಮಾಡಿ ಧ್ವಜವನ್ನು ನೇಯ್ದಿದ್ದಾರೆ. ತಾವು ‘ಲಿಟಲ್ ಇಂಡಿಯನ್ಸ್’ ಎಂಬ ಕಿರುಚಿತ್ರವನ್ನು ನೋಡಿ ಯಾವುದೇ ಹೊಲಿಗೆ ಇಲ್ಲದೇ ಧ್ವಜ ತಯಾರಿಸಲು ಮುಂದಾದೆ ಎಂದು ಹೇಳಿದ್ದಾರೆ.