ಮುಂಬೈ: ಥಾಣೆಯ ಮಾನ್ಪಾಡಾದ ಐಸಿಐಸಿಐ ಬ್ಯಾಂಕ್ನಿಂದ (ICICI Bank) 12 ಕೋಟಿ ರೂ. ನಗದು ಕಳ್ಳತನ ಮಾಡಿದ್ದ ಆರೋಪಿಯನ್ನು ಎರಡುವರೆ ತಿಂಗಳ ನಂತರ ಪೊಲೀಸರು (Police) ಬಂಧಿಸಿದ್ದಾರೆ.
ಮುಂಬ್ರಾದ ನಿವಾಸಿ ಅಲ್ತಾಫ್ ಶೇಖ್ (43) ಬಂಧಿತ (Arrest) ಆರೋಪಿ. ಈತ ಬ್ಯಾಂಕ್ನಲ್ಲಿ (Bank) ಕಸ್ಟೋಡಿಯನ್ ಆಗಿ ಕೆಲಸ ಮಾಡುತ್ತಿದ್ದ. ಕಸ್ಟೋಡಿಯನ್ ಆಗಿ, ಈತ ಬ್ಯಾಂಕಿನ ಲಾಕರ್ ಕೀಗಳ ಕೇರ್ಟೇಕರ್ ಆಗಿದ್ದ.
ಇದರ ಲಾಭವನ್ನು ಪಡೆದುಕೊಂಡಿದ್ದ ಅಲ್ತಾಫ್ ಶೇಖ್ ತನ್ನ ಸಹೋದರಿ ನೀಲೋಫರ್ ಸೇರಿ ಐವರೊಂದಿಗೆ ಬ್ಯಾಂಕ್ನಲ್ಲಿ ದರೋಡೆ ಮಾಡಲು ಒಂದು ವರ್ಷದಿಂದ ಪ್ಲ್ಯಾನ್ ಮಾಡಿಕೊಂಡಿದ್ದ. ಇದರ ಪ್ರಕಾರವಾಗಿಯೇ ಬ್ಯಾಂಕ್ನಲ್ಲಿದ್ದ ಲೋಪದೋಷಗಳನ್ನು ಹಾಗೂ ಎಲ್ಲಾ ವ್ಯವಸ್ಥೆಯನ್ನು ಗಮನಿಸಿದ್ದ. ಆ ಬಳಿಕ ಅಲ್ತಾಫ್ ಹಾಗೂ ಆತನ ಸಹಚರರು ಸೇರಿ ಜು.12 ರಂದು ಕಳ್ಳತನ ಮಾಡಿದ್ದರು.
ತನ್ನ ಪ್ಲ್ಯಾನ್ ಪ್ರಕಾರದಂತೆ ಎಸಿ ಡಕ್ಟ್ನೊಳಗೆ ಒಳ ಹೋಗಿ ಹಾಗೂ ಸಿಸಿಟಿವಿ ಫೂಟೇಜ್ ಅನ್ನು ಧ್ವಂಸಗೊಳಿಸಿ ಹಣವನ್ನು ಕದ್ದಿದ್ದಾನೆ. ಈ ವೇಳೆ ಅಲರಾಮ್ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿದ್ದಾನೆ. ಘಟನೆಗೆ ಸಂಬಂಧಿಸಿ ಮಾರನೇ ದಿನ ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಘಟನೆ ಬಳಿಕ ಅಲ್ತಾಫ್ ಪರಾರಿಯಾಗಿದ್ದಾನೆ. ಅಷ್ಟೇ ಅಲ್ಲದೇ ತನ್ನ ಗುರುತನ್ನು ಬದಲಾಯಿಸಿಕೊಂಡು ಬುರ್ಕಾ ಹಾಕಿ ಓಡಾಡುತ್ತಿದ್ದ.
ಅಲ್ತಾಫ್ ಸಹೋದರಿ ನೀಲೋಫರ್ ತನ್ನ ಮನೆಯಲ್ಲಿ ಸ್ವಲ್ಪ ಹಣವನ್ನು ಬಚ್ಚಿಟ್ಟಿದ್ದಳು. ಪ್ರಕರಣದಲ್ಲಿ ಆಕೆಯನ್ನು ಸಹ ಆರೋಪಿ ಎಂದು ದಾಖಲಿಸಿ ಬಂಧಿಸಲಾಗಿತ್ತು. ಈ ವೇಳೆ ದರೋಡೆಯ ಎಲ್ಲಾ ಸತ್ಯವನ್ನು ಹಾಗೂ ಅಲ್ತಾಫ್ ಎಲ್ಲಿದ್ದಾನೆ ಎನ್ನುವುದರ ಕುರಿತು ಬಾಯ್ಬಿಟ್ಟಿದ್ದಾಳೆ. ಅದಾದ ಬಳಿಕ ಆಕೆಯ ಮಾಹಿತಿಯನ್ನು ಆಧರಿಸಿ ಪುಣೆಯಲ್ಲಿ (Pune) ಅಲ್ತಾಫ್ ಶೇಖ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಬ್ಯಾಂಕ್ನಿಂದ ಕದ್ದ 12.20 ಕೋಟಿಯಲ್ಲಿ ಸುಮಾರು 9 ಕೋಟಿ ರೂ. ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.