ವಿಕ್ರಂ ಲ್ಯಾಂಡರ್ ಸಂಪರ್ಕ ಸಿಗೋವರೆಗೂ ಸೇತುವೆಯಿಂದ ಇಳಿಯಲ್ಲ- ವ್ಯಕ್ತಿ ಹಠ

Public TV
1 Min Read
up man 1

ಲಕ್ನೋ: ಇಸ್ರೋ ವಿಕ್ರಂ ಲ್ಯಾಂಡರ್ ಸಂಪರ್ಕಿಸುವರೆಗೂ ಸೇತುವೆಯಿಂದ ಇಳಿಯಲು ವ್ಯಕ್ತಿ ನಿರಾಕರಿಸುತ್ತಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ನ ಮಾಂದದಲ್ಲಿ ನಡೆದಿದೆ.

ರಜನಿಕಾಂತ್ ಸೇತುವೆ ಹತ್ತಿದ ವ್ಯಕ್ತಿ. ಸೋಮವಾರ ರಜನಿಕಾಂತ್ ಭಾರತದ ರಾಷ್ಟ್ರಧ್ವಜ ಹಿಡಿದು ಪ್ರಯಾಗ್‍ರಾಜ್‍ನಲ್ಲಿ ಇರುವ ನ್ಯೂ ಯಮುನಾ ಸೇತುವೆಯ ಕಂಬ ಹತ್ತಿದ್ದಾನೆ. ಬಳಿಕ ಇಸ್ರೋ ವಿಕ್ರಂ ಲ್ಯಾಂಡರ್ ಸಂಪರ್ಕಿಸುವರೆಗೂ ಕೆಳಗೆ ಇಳಿಯಲ್ಲ ಎಂದು ಹಠ ಹಿಡಿದು ಕುಳಿತಿದ್ದಾನೆ.

up man

ಸೆಪ್ಟೆಂಬರ್ 7ರಂದು ಚಂದ್ರನ ಮೇಲ್ಮೈ ಸ್ಪರ್ಶಿಸಬೇಕಿದ್ದ ವಿಕ್ರಂ ಲ್ಯಾಂಡರ್ ಅಂತಿಮ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡಿತ್ತು. ಇಸ್ರೋ ವಿಜ್ಞಾನಿಗಳು ಆರ್ಬಿಟರ್ ಮೂಲಕ ವಿಕ್ರಂ ಸಂಪರ್ಕಿಸುವ ಪ್ರಯತ್ನವನ್ನು ಮುಂದುವರಿಸಿದ್ದಾರೆ. ವಿಕ್ರಂ ಲ್ಯಾಂಡರ್ ಅಂತಿಮ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡ ಕಾರಣ ರಜನಿಕಾಂತ್ ಮನನೊಂದಿದ್ದನು. ಹಾಗಾಗಿ ಆತ ಸೋಮವಾರ ರಾತ್ರಿ ಸೇತುವೆಯ ಕಂಬ ಹತ್ತಿದ್ದಾನೆ. ಇದನ್ನು ನೋಡಿದ ಸಾರ್ವಜನಿಕರು ತಮ್ಮ ಮೊಬೈಲಿನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ.

ಸೇತುವೆ ಮೇಲೆ ಗಂಟೆಗಟ್ಟಲೆ ಕಾದ ನಂತರ ರಜನಿಕಾಂತ್ ಕಬ್ಬಿಣದ ತಟ್ಟೆ ಮೂಲಕ ಒಂದು ಪತ್ರವನ್ನು ಜನರಿಗೆ ನೀಡಿದ್ದನು. ಪತ್ರದಲ್ಲಿ, ಇಸ್ರೋ ಸಂಪರ್ಕಕ್ಕೆ ಚಂದ್ರಯಾನ-2 ವಿಕ್ರಂ ಲ್ಯಾಂಡರ್ ಸಿಗುವರೆಗೂ ನಾನು ಇಲ್ಲಿಯೇ ಇದ್ದು ಚಂದ್ರದೇವನಿಗೆ ಪ್ರಾರ್ಥನೆ ಮಾಡುತ್ತೇನೆ ಎಂದು ಬರೆದಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *