ಲಕ್ನೋ: ಮದುವೆಯಾದ ಎರಡೇ ದಿನಕ್ಕೆ ಪತ್ನಿಯ ಪ್ರಿಯಕರನಿಂದಲೇ ನವವಿವಾಹಿತ ಕೊಲೆಯಾಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರ್ ಜಿಲ್ಲೆಯಲ್ಲಿ ನಡೆದಿದೆ.
ಲಖನ್ ಸಿಂಗ್ ಹತ್ಯೆಯಾದ ನವವಿವಾಹಿತ. ಲಖನ್ ಸಿಂಗ್ ಪ್ರಿಯಾಂಕಾರನ್ನು ಸಮುದಾಯದ ಸಂಪ್ರದಾಯದಂತೆ ವಿವಾಹವಾಗಿದ್ದರು. ಮದುವೆಯಾದ ನಂತರ ಸಿಂಗ್ ಖಾಸಗಿ ವಿವಾಹ ಸಮಾರಂಭವೊಂದನ್ನು ಆಯೋಜಿಸಿದ್ದು, ತನ್ನ ಕುಟುಂಬದೊಂದಿಗೆ ವಧು ಪ್ರಿಯಾಂಕಾ ಅವರ ಮನೆಗೆ ಹೋಗಿದ್ದರು.
ಆದ್ರೆ ಅನಂತರ ಸಿಂಗ್ ನಾಪತ್ತೆಯಾಗಿದ್ದರು. ತುಂಬಾ ಸಮಯವಾದರೂ ಹಿಂದಿರುಗದ ಕಾರಣ ಮನೆಯವರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು. ಪೊಲೀಸರು ತನಿಖೆ ಮಾಡುವಾಗ ವರನ ಬೈಕ್ ಯಮುನಾ ನದಿಯ ಬಳಿ ಪತ್ತೆಯಾಗಿತ್ತು. ಜೊತೆಗೆ ಶೋಧ ನಡೆಸಿದಾಗ ಲಖನ್ ಸಿಂಗ್ ಮೃತದೇಹವೂ ಪತ್ತೆಯಾಗಿದೆ. ವಿಚಾರಣೆಯ ಬಳಿಕ ಅಜಯ್ ಗೊಯಾಲ್ ಎಂಬವನು ಲಖನ್ನನ್ನು ಕೊಲೆ ಮಾಡಿರುವುದು ತಿಳಿದುಬಂದಿದೆ.
ಮದುವೆಯಾಗುವ ಮುನ್ನ ನಾನು ಅಜಯ್ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದೆ. ಆದರೆ ಆತ ನನ್ನ ಪತಿಯನ್ನು ಕೊಲೆ ಮಾಡುತ್ತಾನೆ ಎಂದು ಕಲ್ಪನೆ ಸಹ ಮಾಡಿರಲಿಲ್ಲ ಎಂದು ಪ್ರಿಯಾಂಕಾ ಹೇಳಿದ್ದಾರೆ.
ಅಜಯ್ ಪ್ರಿಯಾಂಕಾರಿಂದ ಲಖನ್ ಸಿಂಗ್ ಅವರ ದೂರವಾಣಿ ಸಂಖ್ಯೆಯನ್ನು ತೆಗೆದುಕೊಂಡಿದ್ದ. ನಂತರ ಇಬ್ಬರೂ ಸಂಪರ್ಕದಲ್ಲಿದ್ದರು. ಅಜಯ್ ಆಗಾಗ ಸಿಂಗ್ಗೆ ಮತ್ತು ಪ್ರಿಯಾಂಕಾರಿಗೆ ಕಿರುಕುಳ ನೀಡಲು ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ.
ಪ್ರಿಯಾಂಕಾ ಜೊತೆಗಿನ ತನ್ನ ಫೋಟೋಗಳನ್ನು ಸಹ ಸಿಂಗ್ ಗೆ ಕಳುಹಿಸುತ್ತಿದ್ದನು. ಆದರೂ ಸಿಂಗ್ ಅದರ ಬಗ್ಗೆ ಮಾತನಾಡಿರಲಿಲ್ಲ. ಯಾರಿಗೂ ಇದರ ಬಗ್ಗೆ ಹೇಳಿರಲಿಲ್ಲ. ಯಾಕೆಂದರೆ ಸಿಂಗ್ ಪ್ರಿಯಾಂಕಾ ಜೊತೆ ಮದುವೆಯಾಗಿ ಸಂತೋಷದಿಂದ ಇರಲು ಇಷ್ಟಪಟ್ಟಿದ್ದರು ಎಂದು ಲಖನ್ ಕುಟುಂಬದ ಸದಸ್ಯರು ತಿಳಿಸಿದ್ದಾರೆ.