ಚಿಕ್ಕಬಳ್ಳಾಪುರ: ಹಳೆಯ ಮನೆಯನ್ನ ಕೆಡವುತ್ತಿದ್ದ ವೇಳೆ ಊಟ ತಡವಾಗಿ ತಂದಿದ್ದಕ್ಕೆ ಕೈಯಲ್ಲಿದ್ದ ಕಬ್ಬಿಣ ಗಡಾರಿಯಿಂದಲೇ ಕುತ್ತಿಗೆಗೆ ಇರಿದು ಗಂಡನೇ ಹೆಂಡತಿಯನ್ನ ಕೊಲೆ ಮಾಡಿರುವ ಭೀಕರ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಎಮ್ ಗುಂಡ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
26 ವರ್ಷದ ಅಮೃತಾ ಕೊಲೆಯಾದ ಮಹಿಳೆ. 30 ವರ್ಷದ ನಾಗರಾಜ್ ಕೊಲೆ ಮಾಡಿದ ಪಾಪಿ ಪತಿ. ಅಮೃತಾಳನ್ನ ಪ್ರೀತಿಸಿ ಮದುವೆಯಾಗಿದ್ದ ನಾಗರಾಜ್ ಪತ್ನಿಯ ಮನೆಯಲ್ಲೇ ವಾಸವಾಗಿದ್ದನು. ಇನ್ನೂ ಇಬ್ಬರ ಸುಖ ದಾಂಪತ್ಯಕ್ಕೆ ಸಾಕ್ಷಿ 6 ವರ್ಷದ ಹೆಣ್ಣು ಮಗಳು ಹಾಗೂ 3 ವರ್ಷದ ಗಂಡು ಮಗನಿದ್ದಾನೆ.
ಮದುವೆಯಾದ ಹೊಸತರಲ್ಲಿ ಚೆನ್ನಾಗಿಯೇ ಇದ್ದ ನಾಗರಾಜ್ ಸಣ್ಣ ಪುಟ್ಟ ವಿಚಾರಕ್ಕೂ ಪದೇ ಪದೇ ಕ್ಯಾತೆ ತೆಗೆದು ಅಮೃತಾ ಜೊತೆ ಜಗಳ ಮಾಡುತ್ತಿದ್ದನು. ಇಂದು ಸರ್ಕಾರದಿಂದ ನೂತನ ಮನೆ ನಿರ್ಮಾಣಕ್ಕೆ ಹಣ ಮಂಜೂರಾದ ಕಾರಣ ಹಳೆಯ ಮನೆ ಕೆಡವಿ ಅದನ್ನ ಸ್ಬಚ್ಛಗೊಳಿಸಿ ಹೊಸ ಮನೆ ಕಟ್ಟಲು ನಿವೇಶನ ಅಣಿಗೊಳಿಸುತ್ತಿದ್ದನು. ಆದರೆ ಮನೆಯಿಂದ ಪತ್ನಿ ಅಮೃತಾ ಊಟ ತರೋದು ಸ್ವಲ್ಪ ತಡವಾಗಿದೆ.
ಊಟ ತಡವಾಗಿ ತಂದಿದ್ದು ಯಾಕೆ ಅಮೃತ ನಾಗರಾಜ್ ಜೊತೆ ಜಗಳ ಆರಂಭಿಸಿದ್ದಾನೆ. ಕೊನೆಗೆ ಕೈಯಲ್ಲಿದ್ದ ಗಡಾರಿಯಿಂದಲೇ ಅಮೃತಾರ ಕುತ್ತಿಗೆಗೆ ಇರಿದಿದ್ದಾನೆ. ಅಮೃತಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಘಟನೆ ಬಳಿಕ ಪತಿ ನಾಗರಾಜ್ ನಾಪತ್ತೆಯಾಗಿದ್ದಾನೆ. ಈ ಸಂಬಂಧ ಸ್ಥಳಕ್ಕೆ ಮಂಚೇನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೂ ನಾಪತ್ತೆಯಾಗಿರುವ ಆರೋಪಿ ನಾಗರಾಜ್ ನ ಬಲೆಗಾಗಿ ವಿಶೇಷ ಬಲೆ ಬೀಸಿದ್ದಾರೆ.