ಭುವನೇಶ್ವರ: ವ್ಯಕ್ತಿಯೊಬ್ಬ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ಮತ್ತು ಅತ್ತೆಯನ್ನು ಕೊಲೆ ಮಾಡಿರುವ ಘಟನೆ ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಖುಂಟಪಾಲ ಗ್ರಾಮದಲ್ಲಿ ನಡೆದಿದೆ.
ಮೊರಾಡಾ ಪೊಲೀಸ್ ವ್ಯಾಪ್ತಿಯಲ್ಲಿರುವ ಖುಂಟಪಾಲ ಗ್ರಾಮದಲ್ಲಿ ಕೊಲೆ ನಡೆದಿದ್ದು, ಆರೋಪಿಯನ್ನು ಪೂರ್ಣಚಂದ್ರ ಮಹಂತಾ (50) ಎಂದು ಗುರುತಿಸಲಾಗಿದೆ. ಪತ್ನಿ ಮಮತಾ (40) ಮತ್ತು ಅತ್ತೆ ಸುಮತಿ (61) ಇಬ್ಬರನ್ನು ಇಂದು ಬೆಳಗ್ಗೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಪೂರ್ಣಚಂದ್ರ ತನ್ನ ಪತ್ನಿ ಮಮತಾ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನ ಪಟ್ಟಿದ್ದನು. ಇದೇ ವಿಚಾರಕ್ಕೆ ಪ್ರತಿದಿನವೂ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಅಷ್ಟೇ ಅಲ್ಲದೇ ಪತ್ನಿ ಮಮತಾ ಮೇಲೆ ಹಲ್ಲೆ ಮಾಡುತ್ತಿದ್ದನು. ಆದರೆ ಶನಿವಾರ ಪತ್ನಿ ಮಮತಾ ಮತ್ತು ಸುಮತಿ ಇಬ್ಬರನ್ನು ಕೊಲೆ ಮಾಡುವುದಾಗಿ ಬೆದಕರಿಕೆವೊಡ್ಡಿದ್ದನು.
ಇದರಿಂದ ಭಯಗೊಂಡು ಅವರಿಬ್ಬರು ಪೊಲೀಸ್ ಠಾಣೆಗೆ ಹೋಗಿ ರಕ್ಷಣೆ ಕೋರಿದ್ದರು. ತಾಯಿ ಮಗಳು ಮನವಿ ಮೇರೆಗೆ ಪೊಲೀಸರು ಆರೋಪಿ ಪೂರ್ಣಚಂದ್ರನನ್ನು ಬಂಧಿಸಲು ಮೊರಾಡಾ ಪೊಲೀಸರು ಇಂದು ಬೆಳಗ್ಗೆ ಗ್ರಾಮಕ್ಕೆ ಹೋಗಿದ್ದಾರೆ. ಆದರೆ ಅಷ್ಟರಲ್ಲಿಯೇ ಆತ ಇಬ್ಬರನ್ನು ಕೊಡಲಿಯಿಂದ ಹೊಡೆದ ಹತ್ಯೆ ಮಾಡಿ ಪರಾರಿಯಾಗಿದ್ದನು.
ಇತ್ತ ಗ್ರಾಮಸ್ಥರು ತಾಯಿ-ಮಗಳು ರಕ್ಷಣೆ ಕೇಳಿದ್ದರೂ ಯಾವುದೇ ರೀತಿಯ ರಕ್ಷಣೆ ನೀಡಲಿಲ್ಲ ಎಂದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಸದ್ಯಕ್ಕೆ ಪೊಲೀಸರು ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಇತ್ತ ಈ ಕುರಿತು ದೂರು ದಾಖಲಿಸಿಕೊಂಡು ಆರೋಪಿಗಾಗಿ ಶೋಧಕಾರ್ಯ ಮಾಡುತ್ತಿದ್ದಾರೆ.