ಬೆಂಗಳೂರು: ಒಂಟಿಯಾಗಿ ವಾಸವಿದ್ದ ಮಹಿಳೆಯ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಗೋವಿಂದರಾಜ ನಗರದಲ್ಲಿ ನಡೆದಿದೆ.
ನಂಜಮ್ಮ (52) ಕೊಲೆಗೀಡಾದ ಮಹಿಳೆ. ಮೃತ ನಂಜಮ್ಮನ ಮಗಳು ಮದುವೆಯಾಗಿ ಗಂಡನಿಗೆ ವಿಚ್ಛೇದನ ನೀಡಿ ಬೇರೋಬ್ಬ ಯುವಕನ ಜೊತೆ ಲಿವಿಂಗ್ ಟುಗೆದರ್ನಲ್ಲಿ ಇದ್ದಳು. ತಾಯಿಗೆ ಅದನ್ನು ಸಹಿಸಲಾಗುತ್ತಿರಲಿಲ್ಲ. ಈ ಕಾರಣಕ್ಕೆ ಮಗಳಿಗೆ ಮದುವೆ ಆಗದೇ ಅವನ ಜೊತೆ ಇರಬೇಡ ಅಂತ ಆಗಾಗ ಬುದ್ಧಿವಾದ ಹೇಳುತ್ತಿದ್ದರು.
ಪ್ರೀತಿಯ ಅಮಲಿನಲ್ಲಿದ್ದ ಮಗಳು ತಾಯಿಯ ಬುದ್ಧಿ ಮಾತನ್ನು ನಿರಾಕರಿಸಿದ್ದಾಳೆ. ನಂಜಮ್ಮ ನಮ್ಮನ್ನು ದೂರ ಮಾಡುವ ಪ್ರಯತ್ನ ಮಾಡ್ತಾಳೆ ಅಂತ ಆರೋಪಿ ರಾಘು, ಮನೆಗೆ ಹೋಗಿ ವೈರ್ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.
ಪಕ್ಕದ ಮನೆಯವರು ಬಂದು ನೋಡಿದಾಗ ನಂಜಮ್ಮ ಕೊಲೆಯಾಗಿದ್ದರು. ಕೂಡಲೇ ಗೋವಿಂದರಾಜ ನಗರ ಪೊಲೀಸರಿಗೆ ನೆರೆ ಹೊರೆಯವರು ವಿಷಯ ತಿಳಿಸಿದ್ದಾರೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸುತ್ತಿದ್ದಾಗ ಯಾರು ಮಹಿಳೆಯ ಕೊಲೆ ಮಾಡಿದ್ದಾರೆಂದು ಮಾಹಿತಿ ಕಲೆಹಾಕಿದ್ದಾರೆ. ಮಗಳ ಪ್ರೀತಿಯ ವಿಚಾರ ತಿಳಿದು ತನಿಖೆ ಮಾಡಿದಾಗ ಆರೋಪಿ ರಾಘು ಸಿಕ್ಕಿ ಬಿದ್ದಿದ್ದಾನೆ.
ಘಟನೆ ಸಂಬಂಧ ಕೇಸ್ ದಾಖಲಿಸಿಕೊಂಡಿರುವ ಗೋವಿಂದರಾಜ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.