ವಿಜಯವಾಡ: ತನ್ನ ಮೊಬೈಲ್ಗೆ ಯಾರೋ ಒಬ್ಬರು ಕರೆ ಮಾಡಿ ಮಗಳಿಗೆ ಫೋನ್ ಕೊಡಿ ಎಂದ ಬಳಿಕ 14 ವರ್ಷದ ಮಗಳನ್ನ ತಂದೆಯೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಸಾಯಿನಾಥಪುರಂನಲ್ಲಿ ನಡೆದಿದೆ.
ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಆರೋಪಿಯಾದ ಆಟೋ ಡ್ರೈವರ್ ರಮಣನನ್ನು ಬಂಧಿಸಲಾಗಿದೆ. 10ನೇ ಕ್ಲಾಸ್ನಲ್ಲಿ ಓದುತ್ತಿದ್ದ ಮಗಳನ್ನು ಕೊಂದ ನಂತರ ಆರೋಪಿ ಅಂತ್ಯಕ್ರಿಯೆಗಾಗಿ ಸಿದ್ಧತೆ ಮಾಡುತ್ತಿದ್ದ.
ನಡೆದಿದ್ದೇನು?: ಕುಡಿದ ಮತ್ತಿನಲ್ಲಿ ಮನೆಗೆ ಬಂದ ರಮಣ ಕರೆ ಮಾಡಿದ ವ್ಯಕ್ತಿಯ ಬಗ್ಗೆ ಮಗಳನ್ನ ಪ್ರಶ್ನಿಸಿದ್ದಾನೆ. ಆ ವ್ಯಕ್ತಿ ಯಾರೆಂಬುದು ತನಗೆ ಗೊತ್ತಿಲ್ಲವೆಂದು ಮಗಳು ಎಷ್ಟೇ ಹೇಳಿದ್ರೂ ರಮಣ ಆಕೆಯನ್ನ ಮನಬಂದಂತೆ ಹೊಡೆದಿದ್ದಾನೆ. ಪರಿಣಾಮ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಬಾಲಕಿ ಸಾವನ್ನಪ್ಪಿದ ಬಳಿಕ ಆರೋಪಿ ತಂದೆ ಆಕೆಯ ಮೃತದೇಹವನ್ನು ಮನೆಯ ಮುಂದೆ ತಂದು ಹಾಕಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಲು ಹೊರಗೆ ಹೋಗಿದ್ದಾನೆ.
ಅಕ್ಕಪಕ್ಕದ ಮನೆಯವರು ಅನುಮಾನಗೊಂಡು ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಪೊಲೀಸರು ಆರೋಪಿಯನ್ನ ಬಂಧಿಸಿ ಬಾಲಕಿಯ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದೆ.