ಹೈದರಾಬಾದ್: ತನ್ನ ಮಗನ ಸಾವಿಗೆ ಸೇಡು ತೀರಿಸಿಕೊಳ್ಳಲು ವ್ಯಕ್ತಿಯೊಬ್ಬ ಅಣ್ಣನ ಮಗನನ್ನೇ ಅಪಹರಣ ಮಾಡಿ ಹತ್ಯೆ ಮಾಡಿರುವ ಘಟನೆ ಹೈದರಾಬಾದ್ನಲ್ಲಿ ಶುಕ್ರವಾರ ನಡೆದಿದ್ದು, ಆರೋಪಿ ಚಿಕ್ಕಪ್ಪನ್ನು ಪೊಲೀಸರು ಬಂಧಿಸಿದ್ದಾರೆ.
ಹೈದರಾಬಾದ್ನ ದಾದೀಪುರದಲ್ಲಿ ಈ ಘಟನೆ ನಡೆದಿದ್ದು, 7 ವರ್ಷದ ಅಬ್ಬಾಸ್ ಹುಸೈನ್ ರಿಜ್ವಿ ಹತ್ಯೆಯಾದ ಬಾಲಕ. ಚಿಕ್ಕಪ್ಪ ಜಾದವ್ ಅಲಿ ಕೊಲೆ ಆರೋಪಿಯಾಗಿದ್ದು, ಹಳೆ ವೈಷಮ್ಯವೆ ಬಾಲಕನ ಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ. 2008ರಲ್ಲಿ ಅಬ್ಬಾಸ್ ಹುಸೈನ್ ರಿಜ್ವಿಯ ಪೋಷಕರು ಜಾವದ್ ಅಲಿ ಮಗನ ಸಾವಿಗೆ ಕಾರಣರಾಗಿದ್ದರು. ಹೀಗಾಗಿ ಪೋಷಕರ ಮೇಲಿನ ದ್ವೇಷದಿಂದ ಸೇಡು ತೀರಿಸಿಕೊಳ್ಳಲು ಬಾಲಕನನ್ನು ಅಪಹರಣ ಮಾಡಿ ಕೊಲೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಬಾಲಕ ತನ್ನ ಪೋಷಕರ ಜೊತೆ ಮೊಹರಂ ಹಬ್ಬಕ್ಕೆಂದು ದಾದೀಪುರದಲ್ಲಿರುವ ತನ್ನ ಅಜ್ಜ ಖಮರ್ ಹುಸೈನ್ ರಿಜ್ವಿ ಮನೆಗೆ ಹೋಗಿದ್ದನು. ಶುಕ್ರವಾರದಂದು ಮೊಹರಂ ಮೊದಲ ದಿನವಾದ್ದರಿಂದ ಅಲಮ್ ಕೂರಿಸಲು ತಯಾರಿ ನಡೆಸುತ್ತಿದ್ದ. ಇದೇ ಸಂದರ್ಭದಲ್ಲಿ ಚಿಕ್ಕಪ್ಪ ಜಾವಿದ್ ಅಲಿ ಬಾಲಕನನ್ನು ಉಪಾಯದಿಂದ ಕರೆದೊಯ್ದು ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ. ಇಲ್ಲಿನ ರೇನ್ ಬಜಾರ್ ಪ್ರದೇಶದ ನಾಗಾಬೌಲಿ ಸ್ಮಶಾನದಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ.
ಆರೋಪಿ ಜಾವದ್ ಅಲಿ ತನ್ನ ಮಗನ ಸಾವಿಗೆ ಬಾಲಕನ ಅಜ್ಜನನ್ನು ಹೊಣೆಯಾಗಿಸಿದ್ದಾನೆ. ಜಾವದ್ ಸೌದಿ ಅರೇಬಿಯಾದಲ್ಲಿದ್ದಾಗ ತನ್ನ ಮಗನನ್ನು ಖಮರ್ ಹುಸೇನ್ ರಿಜ್ವಿಯ ಆಶ್ರಯದಲ್ಲಿ ಬಿಟ್ಟಿದ್ದ. ಹೀಗಾಗಿ ಮಗನ ಸಾವಿಗೆ ಸೇಡು ತೀರಿಸಿಕೊಳ್ಳಲು ಅಬ್ಬಾಸ್ ಹುಸೇನ್ ರಿಜ್ವಿಯನ್ನ ಕೊಲೆ ಮಾಡಿದ್ದಾನೆ.
ರಿಜ್ವಿ ಅಜ್ಜ ಇಲ್ಲಿನ ಬಿಬಿ ಕಾ ಆಲಮ್ನಲ್ಲಿ ಅಲಮ್ ಬಾರ್ದರ್ ಆಗಿ ಕೆಲಸ ಮಾಡುತ್ತಿದ್ದು, ಅಜ್ಜನಂತೆ ಬಾಲಕ ಕೂಡ ಅಲಮ್ ಬಾರ್ದರ್ ಆಗಬಹುದು ಎಂದು ಜಾವದ್ ಭಾವಿಸಿದ್ದ. ಹೀಗಾಗಿ ಆತನನ್ನು ಕೊಲ್ಲಲು ನಿರ್ಧರಿಸಿದ್ದ. ಈ ಸಂಬಂಧ ಆರೋಪಿ ಜಾವದ್ ಅಲಿ ವಿರುದ್ಧ ಐಪಿಸಿ ಸೆಕ್ಷನ್ 363 ಮತ್ತು 302ರಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಡಿಸಿಪಿ ವಿ. ಸತ್ಯನಾರಾಯಣ ತಿಳಿಸಿದ್ದಾರೆ.