– ಕ್ಯಾನ್ಸರ್ ಪೀಡಿತ ಹೆಂಡ್ತಿಯನ್ನು ಬಿಟ್ಟು ಬದುಕಲ್ಲ, ಇಬ್ಬರು ಒಂದೇ ಸಾರಿ ಸಾಯೋಣ ಎಂದು ಕೊಲೆ
ಬೆಂಗಳೂರು: ನಗರದ ಸದಾಶಿವನಗರದಲ್ಲಿ ಪತಿಯೇ ತನ್ನ ಪತ್ನಿ ಹಾಗೂ ಸಾಕು ನಾಯಿಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೀಗ ಸ್ಟೋಟಕ ತಿರುವು ಸಿಕ್ಕಿದೆ. ಕ್ಯಾನ್ಸರ್ ಪೀಡಿತ ಪತ್ನಿಯನ್ನು ಬಿಟ್ಟು ಬದುಕಲಾರದೇ ಪತಿ ತನ್ನ ಪತ್ನಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪತ್ನಿ ಮಮತಾ ಉಪಾಧ್ಯಾಯಗೆ ಕ್ಯಾನ್ಸರ್ ಕಾಯಿಲೆ ಇರುವ ವಿಚಾರ ಪತಿ ಅತುಲ್ ಉಪಾಧ್ಯಾಯಗೆ ಇತ್ತೀಚೆಗಷ್ಟೇ ಗೊತ್ತಾಗಿತ್ತು. ವೈದ್ಯರ ಬಳಿ ತೋರಿಸಿದ್ರೆ, ಕ್ಯಾನ್ಸರ್ ನಾಲ್ಕನೇ ಹಂತದಲ್ಲಿದೆ ಎಂದು ವೈದ್ಯರು ಏನು ಮಾಡೋದಕ್ಕೆ ಆಗಲ್ಲ ಎಂದು ಹೇಳಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಪತ್ನಿ ಸಾಯ್ತಾಳೆ ಎನ್ನುವ ವಿಚಾರ ತಿಳಿದು ಪತಿ ಮಾನಸಿಕವಾಗಿ ಕುಗ್ಗಿಹೋಗಿದ್ದ. ನಿನ್ನ ಬಿಟ್ಟು ನಾನು ಬದುಕಲ್ಲ, ನಿನ್ನ ಸಾವನ್ನು ನಾನು ನೋಡೋಕೆ ಆಗಲ್ಲ, ಇಬ್ಬರು ಒಟ್ಟಿಗೆ ಸಾಯೋಣ ಎಂದು ಹೇಳಿದ್ದ. ಆದರೆ ಪತ್ನಿ ಮಮತಾಗೆ ಒಟ್ಟಿಗೆ ಸಾಯೋಕೆ ಇಷ್ಟ ಇರಲಿಲ್ಲ. ಇದನ್ನೂ ಓದಿ: ಪತ್ನಿ, ಮುದ್ದಿನ ಶ್ವಾನವನ್ನು ಕೊಂದು 6ನೇ ಮಹಡಿಯಿಂದ ಜಿಗಿದ ಉದ್ಯಮಿ!
ಇದೇ ವಿಚಾರವಾಗಿ ಪತಿ-ಪತ್ನಿ ನಡುವೆ ಗಲಾಟೆ ನಡೆದಿತ್ತು. ಹಾಗಾಗಿ ಪತಿ ಅತುಲ್ ತನ್ನ ಪತ್ನಿಯನ್ನು ಕೊಲೆ ಮಾಡಿದ್ದ. ಮತ್ತೊಂದು ದುರಂತ ಅಂದ್ರೆ ಮಕ್ಕಳಿಲ್ಲದ ಈ ದಂಪತಿ ನಾಯಿಯನ್ನೇ ಮಗುವಂತೆ ಸಾಕಿದ್ದರು. ನಾವಿಬ್ರು ಹೋದ ಮೇಲೆ ನಾಯಿಗತಿ ಏನು ಎಂದು ಯೋಚನೆ ಮಾಡಿದ ಅತುಲ್ ತನ್ನ ಮುದ್ದು ನಾಯಿಯನ್ನು ಕೆಳಗೆ ಎಸೆದು ಕೊಂದು ಹಾಕಿದ್ದ. ಇದೆಲ್ಲಾವನ್ನು ನೋಡಿದ ನಂತರ ತಾನು ಕೂಡ ಅದೇ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡ್ಕೊಂಡಿದ್ದ.
ಏನಿದು ಘಟನೆ?
ಬೆಂಗಳೂರಿನ ಸದಾಶಿವನಗರದಲ್ಲಿರುವ ಅಲೆಕ್ಸ್ ಸೈಕಾನ್ ಪೋಲರಿಸ್ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ ಮುಂಬೈ ಮೂಲದ ಉದ್ಯಮಿ ಅತುಲ್ ಉಪಾಧ್ಯಾಯ ಪತ್ನಿ ಮಮತಾ ಉಪಾಧ್ಯಾಯ ಮನೆಯಲ್ಲಿ ಅದೊಂದು ಘೋರ ಘಟನೆ ನಡೆದು ಹೋಗಿತ್ತು. ಕಳೆದ ಮಂಗಳವಾರ ಮನೆಗೆ ಬಂದ ಗಂಡ ಅತುಲ್ ಉಪಾಧ್ಯಾಯ, ಏಕಾಏಕಿ ಪತ್ನಿ ಮಮತಾ ಉಪಾಧ್ಯಾಯಳನ್ನು ಕೊಲೆ ಮಾಡಿ, ಮಗನಂತೆ ಸಾಕಿದ್ದ ನಾಯಿಯನ್ನು ನಾಲ್ಕನೇ ಹಂತದಿಂದ ಎಸೆದು ನಂತರ ತಾನು ಕೂಡ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡ್ಕೊಂಡಿದ್ದ.
ಪತಿ ಅತುಲ್ ಉಪಾಧ್ಯಾಯ ಸಾಯುವ ಮೊದಲು, ಆರು ಪುಟಗಳ ಡೆತ್ ನೋಟ್ ಕೂಡ ಬರೆದಿದ್ದು, ಎಫ್ಎಸ್ಎಲ್ ವರದಿ ನಂತರ ಮತ್ತಷ್ಟು ವಿಚಾರಗಳು ತಿಳಿಯಬೇಕಿದೆ.