ಬೆಂಗಳೂರು: ನಡು ವಯಸ್ಸಿನ ವ್ಯಕ್ತಿಯೊಬ್ಬನಿಗೆ 20 ರ ಹರೆಯದ ಹುಡುಗಿ ಬೇಕಿತ್ತು. ನಿಮ್ಮ ಮಗಳನ್ನ ಮದುವೆ ಮಾಡಿಕೊಡಿ ಅಂತಾ ದಿನಾಲೂ ದುಂಬಾಲು ಬೀಳುತ್ತಿದ್ದ. ನಿನಗೆ ಹೆಣ್ಣು ಕೊಡಲ್ಲ ಅಂದಿದ್ದಕ್ಕೆ ಹುಡುಗಿಯನ್ನ ಹೊತ್ತೊಯ್ದು ನಡು ರಾತ್ರಿಯಲ್ಲಿ ತಾಳಿ ಕಟ್ಟಿ ಅತ್ಯಾಚಾರವೆಸಗಿದ್ದಾನೆ.
ಹೌದು. ಬೆಂಗಳೂರಿನ ದಾಸರಹಳ್ಳಿಯ ನಿವಾಸಿ ಸಂತೋಷ್ ಎಂಬಾತನಿಗೆ 20ರ ಹರೆಯದ ಹುಡುಗಿ ಬೇಕಂತೆ. ಹೀಗಾಗಿ ನಿಮ್ಮ ಮಗಳನ್ನ ಮದುವೆ ಮಾಡಿಕೊಡಿ ಅಂತಾ ತನ್ನ ಎದುರು ಮನೆಯವರ ಬೆನ್ನು ಬಿದ್ದಿದ್ದ. ಈಗಾಗಲೇ ಮದುವೆಯಾಗಿ ಹೆಂಡ್ತಿ ಮಕ್ಕಳಿದ್ದು, ಅವರಿಂದ ದೂರವಿರೋ ಇವನಿಗೆ ನೆರೆಮನೆಯವರು ಈ ವಿಚಾರವನ್ನು ನಿರಾಕರಿಸಿದ್ದರು. ಯಾವ ಪೋಷಕರು ಕೂಡ ಆ ಕೆಲಸ ಮಾಡಲ್ಲ. ಹೀಗಾಗಿ ಸಂತೋಷನ ಕೀಚಕನ ಆಸೆಗೆ ತಣ್ಣೀರು ಬಿದ್ದಿತ್ತು.
ಆದ್ರೆ ಮೂರು ದಿನಗಳ ಹಿಂದೆ ಅಂದ್ರೆ ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಹುಡುಗಿ ಎಂದಿನಂತೆ ತನ್ನ ಅಜ್ಜಿಯ ಮನೆಗೆ ಮಲಗಲು ಹೋಗುತ್ತಿದ್ದಳು. ಈ ವೇಳೆ ಸಂತೋಷ ಹುಡುಗಿಯನ್ನ ತನ್ನ ಮನೆಗೆ ಹೊತ್ತೊಯ್ದು ಬಲವಂತವಾಗಿ ತಾಳಿ ಕಟ್ಟಿದ್ದಾನೆ. ಬಳಿಕ ಬಲವಂತವಾಗಿಯೇ ಅತ್ಯಾಚಾರ ಕೂಡ ಎಸಗಿದ್ದಾನೆ. ಇತ್ತ ಅಜ್ಜಿ ಮನೆಗೆ ಮಗಳು ಹೋಗಿಲ್ಲ..? ಎಲ್ಲಿಗೆ ಹೋದ್ಲು..? ಅಂತಾ ಹುಡುಕಾಡಿದಾಗ ಮಾರನೇ ದಿನ ಮಧ್ಯಾಹ್ನದ ವೇಳೆಗೆ ಸಂತೋಷನ ಮನೆಯಲ್ಲಿ ಅಕ್ರಮವಾಗಿ ಕೂಡಿ ಹಾಕಿದ್ದು ಬೆಳಕಿಗೆ ಬಂದಿದೆ.
ಆರೋಪಿ ಸಂತೋಷ್ ವಿರುದ್ಧ ಕಿಡ್ನ್ಯಾಪ್ ಮಾಡಿ ಅಕ್ರಮವಾಗಿ ಕೂಡಿಟ್ಟು ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ಸಂತೋಷನನ್ನ ಪೊಲೀಸರು ಜೈಲಿಗಟ್ಟಿದ್ದಾರೆ.