ಶಿವಮೊಗ್ಗ: ತವರು ಮನೆಯವರು ಆಸ್ತಿಯನ್ನು ತನ್ನ ಹೆಸರಿಗೆ ಬರೆಯಲಿಲ್ಲ ಎಂಬ ಕಾರಣಕ್ಕೆ ಪತಿಯೇ ಪತ್ನಿಗೆ ವಿಷ ಕುಡಿಸಿ ಕೊಂದ ಆಘಾತಕಾರಿ ಘಟನೆ ಶಿವಮೊಗ್ಗ ತಾಲೂಕು ಮಂಡಘಟ್ಟದಲ್ಲಿ ನಡೆದಿದೆ.
ಹೊನ್ನಾಳಿ ತಾಲೂಕು ಗೋವಿನಕೋವಿ ಗ್ರಾಮದ ರಾಜಪ್ಪ ಎಂಬವರ ಮಗಳು, ಎಂಜಿನಿಯರಿಂಗ್ ಪದವೀಧರೆ ನಳಿನಾ ವರದಕ್ಷಿಣೆ ದಾಹಕ್ಕೆ ಬಲಿಯಾದ ಯುವತಿ. ಈಕೆ ಏಳು ತಿಂಗಳ ಗರ್ಭಿಣಿಯಾಗಿದ್ದು, ಮಗು ಕೂಡಾ ಮೃತಪಟ್ಟಿದೆ.
ರಾಜಪ್ಪ- ಕಮಲಮ್ಮ ಅವರ ಏಕೈಕ ಮಗಳು ನಳಿನಾ ಅವರನ್ನು ಚೇತನ್ ಪ್ರೀತಿಸುವ ನಾಟಕ ಮಾಡಿ, ಕಳೆದ ಏಪ್ರಿಲ್ ನಲ್ಲಿ ಮೈಸೂರಿಗೆ ಕರೆದುಕೊಂಡು ಹೋಗಿ ಮದುವೆ ಆಗಿದ್ದನು. ಅಂದಿನಿಂದಲೂ ವರದಕ್ಷಿಣೆ ಹಣಕ್ಕಾಗಿ ಪೀಡಿಸುತ್ತಿದ್ದ. ತವರು ಮನೆ ಆಸ್ತಿಯಲ್ಲಿ ಪಾಲು ತೆಗೆದುಕೊಳ್ಳಲು ಒತ್ತಾಯ ಮಾಡಿದ್ದನು ಎನ್ನಲಾಗಿದೆ.
ಕೊನೆಗೆ ತವರು ಮನೆಯವರು ಪಾಲು ಕೊಟ್ಟರೂ ಜಂಟಿ ಖಾತೆ ಮಾಡಿದರು. ಆದರೆ ಈ ಎಲ್ಲಾ ಆಸ್ತಿ ಮಾರಾಟ ಮಾಡಬೇಕು. ನನ್ನ ಹೆಸರಿಗೇ ಆಸ್ತಿ ಬರೆಯಿರಿ ಎಂದು ಚೇತನ್ ಒತ್ತಾಯಿಸಿದ್ದ. ಇದಕ್ಕೆ ಒಪ್ಪದಿದ್ದಾಗ ತನ್ನ ತಾಯಿ, ಅಜ್ಜನ ಜೊತೆ ಸೇರಿ ನಳಿನ ಗೆ ಬಲವಂತವಾಗಿ ವಿಷ ಕುಡಿಸಿದ್ದಾನೆ. ಚಿಕಿತ್ಸೆ ಫಲಕಾರಿಯಾಗದೆ ನಳಿನ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಪ್ರೀತಿ ಮಾಡಿ ಮದುವೆ ಆಗಿ ವಿಷ ಕುಡಿಸಿದ ಪತಿ ಚೇತನ್, ಆತನ ತಾಯಿ ಲತಾ, ಕೃತ್ಯಕ್ಕೆ ಕೈ ಜೋಡಿಸಿದ ಅಜ್ಜ ಹಾಲಪ್ಪರನ್ನು ಕುಂಸಿ ಪೊಲೀಸರು ಬಂಧಿಸಿದ್ದಾರೆ.