ನವದೆಹಲಿ: 32 ವರ್ಷದ ವ್ಯಕ್ತಿಯೊಬ್ಬ ಸಹೋದರನನ್ನು ಜೈಲಿಗೆ ಕಳುಹಿಸಲು ತನ್ನನ್ನು ತಾನೇ ತಾನೇ ಶೂಟ್ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ಆರೋಪಿ ಅಜಯ್ (32), ಈತ ತನ್ನ ಪೂರ್ವಜರ ಆಸ್ತಿಗೆ ತಾನೊಬ್ಬನೆ ಯಜಮಾನ ಆಗಬೇಕೆಂದು ಆಸೆ ಪಟ್ಟಿದ್ದನು. ಇದಕ್ಕೆ ಅಡ್ಡವಾಗಿದ್ದ ಆತನ ಸಹೋದರನನ್ನು ಜೈಲಿಗೆ ಕಳುಹಿಸಬೇಕೆಂದು ಪ್ಲಾನ್ ಮಾಡಿ ತಾನೇ ಗುಂಡು ಹಾರಿಸಿಕೊಂಡಿದ್ದನು ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ವಿವರ: ಆರೋಪಿಯ ಸ್ನೇಹಿತ ಸಂದೀಪ್ ನನ್ನ ಸ್ನೇಹಿತನಿಗೆ ಶೂಟ್ ಮಾಡಿದ್ದಾರೆ ಎಂದು ಪೊಲೀಸ್ ಠಾಣೆಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾನೆ. ತಕ್ಷಣ ಪೊಲೀಸರ ತಂಡ ಸ್ಥಳಕ್ಕೆ ದೌಡಾಯಿಸಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಜಯ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡಿದ್ದ ಅಜಯ್ ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದು, ನಂತರ ಡಿಸ್ಚಾರ್ಜ್ ಆಗಿ ಮನೆಗೆ ವಾಪಸ್ ಆಗಿದ್ದಾನೆ.
ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮಾಡಿದ್ದಾರೆ. ಘಟನೆ ನಡೆದ ಪ್ರದೇಶದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಅಷ್ಟೇ ಅಲ್ಲದೇ ನೆರೆಹೊರೆಯವರನ್ನು ವಿಚಾರಣೆ ಮಾಡಿದ್ದಾರೆ. ಆಗ ಸತ್ಯ ಬೆಳಕಿಗೆ ಬಂದಿದೆ. ಆದರೆ ಅಜಯ್ ವಿಚಾರಣೆ ಮಾಡುವಾಗ, ನಾನು ಅಂಗಡಿ ಬಾಗಿಲು ಮುಚ್ಚಿ ಹೊರಬಂದೆ. ಆಗ ನನ್ನ ಸಹೋದರ ಮತ್ತು ಆತನ ಇಬ್ಬರು ಸ್ನೇಹಿತರು ಬೈಕಿನಲ್ಲಿ ಬಂದರು. ಆದರೆ ಆತ ದೂರದಲ್ಲಿ ನಿಂತು ಶೂಟ್ ಮಾಡಿದನು. ಅದರಲ್ಲಿ ಒಂದು ಗುಂಡು ನನ್ನ ಹೊಟ್ಟೆಗೆ ಬಿತ್ತು. ನಾನು ಪ್ರಜ್ಞಾಹೀನನಾಗಿ ಕುಸಿದು ಬಿದ್ದೆ ಎಂದು ಹೇಳಿದ್ದನು.
ಪೊಲೀಸ್ ವಿಚಾರಣೆಯ ವೇಳೆ ಅಜಯ್ ಮುಖ್ಯ ಆರೋಪಿ ಎಂದು ತಿಳಿದು ಬಂದಿದೆ. ಈತ ಆಸ್ತಿಗಾಗಿ ತನ್ನ ಮೂವರು ಸ್ನೇಹಿತರ ಜೊತೆ ಕೂಡಿ ಈ ಸ್ಕೆಚ್ ಹಾಕಿದ್ದು, ಪೊಲೀಸ್ ಠಾಣೆಗೆ ಫೋನ್ ಮಾಡಿದ್ದ ಸಂದೀಪ್ ನಿಂದಲೇ ತಾನೇ ಗುಂಡು ಹಾರಿಸಿಕೊಂಡಿದ್ದನು. ಸದ್ಯಕ್ಕೆ ವಿಷಯ ತಿಳಿಯುತ್ತಿದ್ದಂತೆ ಆರೋಪಿ ನಗರದಿಂದ ಪರಾರಿಯಾಗುತ್ತಿದ್ದನು. ಪೊಲೀಸರು ಆತನನ್ನು ಹಿಡಿದು ವಶಕ್ಕೆ ಪಡೆದಿದ್ದಾರೆ
ಆರೋಪಿಯ ಕುಟುಂಬದವರು ಮೂರು ಬೆಡ್ ರೂಮ್ ನ ಮನೆಯಲ್ಲಿ ವಾಸಿಸುತ್ತಿದ್ದಾರೆ. ಆ ಮನೆ ಸಹೋದರನ ಹೆಸರಿನಲ್ಲಿತ್ತು. ಆದ್ದರಿಂದ ಮನೆಯನ್ನು ತನ್ನ ಹೆಸರಿಗೆ ಬರೆಸಿಕೊಳ್ಳಬೇಕು ಎಂದು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.