ದಾವಣಗೆರೆ: ಪ್ರೀತಿಯಿಂದ ಸಾಕಿದ್ದ ಟಗರು ಸಾವನ್ನಪ್ಪಿದ್ದು, ಮಾಲೀಕ ಮನುಷ್ಯರ ರೀತಿ ಅದಕ್ಕೆ ಅಂತ್ಯ ಸಂಸ್ಕಾರ ಮಾಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ನಗರದ ವಿನೋಬಾ ನಗರದ ಚಂದ್ರು ಎಂಬ ಯುವಕ ಕಳೆದ ಆರು ವರ್ಷಗಳಿಂದ ಜೂನಿಯರ್ ಕಾಳಾ ಎನ್ನುವ ಟಗರನ್ನು ಸಾಕಿದ್ದರು. ಕಾಳಾ ಎಂದರೆ ಇಡೀ ದಾವಣಗೆರೆಗೆ ಅಚ್ಚು ಮೆಚ್ಚು. ಐದು ವರ್ಷಗಳಲ್ಲಿ ಟಗರು ಕಾಳಗದಲ್ಲಿ 40ಕ್ಕೂ ಹೆಚ್ಚು ಬಹುಮಾನ ಗೆದ್ದಿತ್ತು. ಎರಡು ಬೈಕು, ಚಿನ್ನದ ಸರ ಸೇರಿದಂತೆ ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಳ್ಳುವ ಮೂಲಕ ಜಿಲ್ಲೆಗೆ ಅಚ್ಚುಮೆಚ್ಚಾಗಿತ್ತು.
ಆದ್ರೆ ಬುಧವಾರ ರಾತ್ರಿ ಜ್ವರದಿಂದ ಬಳಲುತ್ತಿದ್ದ ಜೂನಿಯರ್ ಕಾಳಾ ಬೆಳಗ್ಗೆಯೊಳಗೆ ಮೃತಪಟ್ಟಿದೆ. ಇದರಿಂದ ತುಂಬಾ ದುಃಖ ಪಟ್ಟ ಚಂದ್ರು, ಟಗರಿನ ಅಂತ್ಯ ಸಂಸ್ಕಾರವನ್ನು ಮಾಡಲು ಮುಂದಾಗಿದ್ದಾರೆ. ಮನೆಯ ಮುಂದೆ ಪೆಂಡಲ್ ಹಾಕಿ ಅಂತಿಮ ದರ್ಶನಕ್ಕೆ ಇಟ್ಟಿದ್ದರು. ಅಲ್ಲದೆ ಮನುಷ್ಯರಂತೆಯೇ ವಿಧಿ ವಿಧಾನಗಳ ಮೂಲಕ ಅಂತ್ಯ ಸಂಸ್ಕಾರವನ್ನು ನಡೆಸಿದ್ದಾರೆ.