ಹೈದರಾಬಾದ್: ತನ್ನನ್ನು ಬಿಟ್ಟು ತವರು ಮನೆ ಸೇರಿಕೊಂಡು ಪತ್ನಿ ಮಾತನಾಡುತ್ತಿಲ್ಲವೆಂದು ಮನನೊಂದ ವ್ಯಕ್ತಿಯೊಬ್ಬ ಮೊಬೈಲ್ ಟವರ್ ಏರಿ ಪ್ರತಿಭಟನೆ ಮಾಡಿದ ಘಟನೆಯೊಂದು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.
27 ವರ್ಷದ ನಮಲ ಚಂದ್ರು ಮೊಬೈಲ್ ಟವರ್ ಏರಿದ ವ್ಯಕ್ತಿ. ಈತನಿಗೆ ಎರಡು ತಿಂಗಳ ಹಿಂದೆಯಷ್ಟೇ 25 ವರ್ಷದ ವಿಜಯಲಕ್ಷ್ಮಿ ಎಂಬಾಕೆಯ ಜೊತೆ ವಿವಾಹವಾಗಿತ್ತು. ಮದುವೆಯಾದ ಬಳಿಕ ವಿಜಯಲಕ್ಷ್ಮಿ ಹಾಗೂ ಚಂದ್ರು ಅನ್ಯೋನ್ಯವಾಗಿರಲಿಲ್ಲ. ಇಬ್ಬರ ಮಧ್ಯೆ ಸರಿ ಹೋಗುತ್ತಿಲ್ಲದಿದ್ದರಿಂದ ಚಂದ್ರುವನ್ನು ಬಿಟ್ಟು ವಿಜಯಲಕ್ಷ್ಮಿ ತವರು ಮನೆ ಸೇರಿಕೊಂಡಿದ್ದಳು.
ಪತ್ನಿಯ ನಡತೆಯಿಂದ ನೊಂದಿದ್ದ ಚಂದ್ರು ಮಂಗಳವಾರ ಬೆಳಗ್ಗೆ ವಿಜಯಲಕ್ಷ್ಮಿ ತನ್ನ ಪೋಷಕರ ಜೊತೆ ನೆಲೆಸಿರುವ ಗ್ರಾಮದಲ್ಲಿ ಇರುವಂತಹ ಮೊಬೈಲ್ ಟವರ್ ಹತ್ತಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ವಿಜಯಲಕ್ಷ್ಮಿ ಟವರ್ ನಿಂದ ಕೆಳಗಿಳಿಯುವಂತೆ ಪತಿಯಲ್ಲಿ ಕೇಳಿಕೊಂಡಿದ್ದಾಳೆ. ಆದರೆ ಚಂದ್ರು, ನನ್ನ ಪೋಷಕರ ಬಳಿ ಮಾತನಾಡು. ಅಲ್ಲಿಯವರೆಗೆ ನಾನು ಟವರ್ ನಿಂದ ಇಳಿಯಲ್ಲ ಅಂತ ಹೇಳಿರುವುದಾಗಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.
ಇದಕ್ಕೂ ಮೊದಲು ವಿಜಯಲಕ್ಷ್ಮಿ ಐಪಿಸಿ ಸೆಕ್ಷನ್ 498(ಎ) (ಪತಿ ಅಥವಾ ಪತಿಯ ಸಂಬಂಧಿಕರಿಂದ ಮಹಿಳೆಗೆ ಕಿರುಕುಳ) ಅಡಿಯಲ್ಲಿ ಪರ್ಚುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಇತ್ತ ಚಂದ್ರು ಮನೆಯವರು ಕೂಡ ವಿಜಯಲಕ್ಷ್ಮಿ ವಿರುದ್ಧ ನಲ್ಲಪಾಡು ಪೊಲೀಸ್ ಠಾಣೆಯಲ್ಲಿ ದೌರ್ಜನ್ಯ ದೂರು ದಾಖಲಿಸಿದ್ದಾರೆ.
ಟವರ್ ಏರುವುದಕ್ಕೂ ಮೊದಲು ಚಂದ್ರು ಹಲವು ಬಾರಿ ತನ್ನ ಪತ್ನಿಯನ್ನು ಸಮಾಧಾನಪಡಿಸಿ ಮನೆಗೆ ಕರೆಸಿಕೊಳ್ಳುವ ಪ್ರಯತ್ನ ಮಾಡಿದ್ದನು. ಕೆಲವು ಮನೆಗೆ ಬರುವಂತೆ ಬೆದರಿಸಿದ್ದನು. ಅಲ್ಲದೆ ಆತ್ಮಹತ್ಯೆಗೆ ಯತ್ನ ಕೂಡ ಮಾಡಿದ್ದನು. ಒಂದು ಬಾರಿ ನಿದ್ದೆ ಮಾತ್ರೆ ಸೇವಿಸಿದ್ದು, ಮಣಿಕಟ್ಟನ್ನು ಕೂಡ ಕತ್ತರಿಸಲು ಯತ್ನಿಸಿದ್ದನು. ಇಷ್ಟು ಮಾತ್ರವಲ್ಲದೇ ಕ್ರಿಮಿನಾಶಕವನ್ನೂ ಸೇವಿಸಿದ್ದನು. ಮತ್ತೊಂದು ಬಾರಿ ರೈಲ್ವೆ ಟ್ರ್ಯಾಕ್ ಅಡಿಯಲ್ಲೂ ಮಲಗಿದ್ದನು ಎಂದು ಸಬ್ ಇನ್ಸ್ ಪೆಕ್ಟರ್ ರಂಗನಾಥ್ ವಿವರಿಸಿದ್ದಾರೆ.
ಪೊಲೀಸರು ಕೂಡ ಚಂದ್ರುವನ್ನು ಟವರ್ ನಿಂದ ಇಳಿಸಲು ಪ್ರಯತ್ನಿಸುತ್ತಿದ್ದು, ಇಳಿದ ಬಳಿಕ ಆತನ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳುವುದಾಗಿ ರಂಗನಾಥ್ ಹೇಳಿದ್ದಾರೆ.