ಚಿಕ್ಕಬಳ್ಳಾಪುರ: ಪವರ್ ಗ್ರಿಡ್ ಅಧಿಕಾರಿಗಳು ಜಮೀನಿಗೆ ಸಂಬಂಧಿಸಿದಂತೆ 80 ವರ್ಷದ ಅಜ್ಜಿಗೆ 80 ಲಕ್ಷ ರೂ. ಕೊಡಲು ಮುಂದಾಗಿದ್ದರು. ಆದರೆ ಈ ಮಧ್ಯೆ ಮಾರ್ವಾಡಿಯೊಬ್ಬ ಬಂದು ಅಷ್ಟೂ ಹಣವನ್ನು ವಂಚನೆ ಮಾಡಿ ಪಡೆದುಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
80 ವರ್ಷದ ಲಕ್ಷ್ಮಮ್ಮ ಅವರಿಗೆ ಮಾರ್ವಾಡಿ ರವಿ ಮೋಸ ಮಾಡಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಮಜ್ಜಿಗೆ ಹೊಸಹಳ್ಳಿಯಲ್ಲಿ ಲಕ್ಷ್ಮಮ್ಮ ಅವರಿಗೆ ವಿಶ್ವವಿಖ್ಯಾತ ನಂದಿಗಿರಿಧಾಮದ ತಪ್ಪಲಲ್ಲಿ ಕೋಟ್ಯಾಂತರ ಬೆಲೆ ಬಾಳುವ 3 ಎಕರೆ 17 ಗುಂಟೆ ಜಮೀನಿದೆ. 1 ಎಕರೆ ಕೋಟಿ ರೂಪಾಯಿ ಬೆಲೆ ಬಾಳುವ ಈ ಭೂಮಿಯಲ್ಲಿ ಈಗ ಕೇಂದ್ರ ಸರ್ಕಾರ ಸ್ವಾಮ್ಯದ ಪವರ್ ಗ್ರಿಡ್ ಸಂಸ್ಥೆಯ 765 ಕೆವಿ ವಿದ್ಯುತ್ ಮಾರ್ಗ ನಿರ್ಮಾಣ ಮಾಡುತ್ತಿದೆ. ಹೈಟೆನ್ಷನ್ ಲೈನ್ ಜಮೀನಿನ ಮೇಲೆ ಹಾದು ಹೋಗುತ್ತಿದೆ. ಹೀಗಾಗಿ ಪವರ್ ಗ್ರಿಡ್ ಸಂಸ್ಥೆ ಈ ಅಜ್ಜಿಗೆ ಬರೋಬ್ಬರಿ 81.43 ಲಕ್ಷ ರೂ. ಪರಿಹಾರ ವಿತರಣೆಗೆ ಮುಂದಾಗಿತ್ತು. ಆದರೆ ಅಷ್ಟರಲ್ಲೇ ಮಧ್ಯ ಬಂದ ಮಾರ್ವಾಡಿಯೊಬ್ಬ ಆ ಜಮೀನು ನನ್ನದು ಅಂತ ನಕಲಿ ದಾಖಲಿ ಕೊಟ್ಟು ಪವರ್ ಗ್ರಿಡ್ ಅಧಿಕಾರಿಗಳಿಂದ 81 ಲಕ್ಷ ಹಣವನ್ನೂ ಪಡೆದು ಮನೆ ಸೇರಿಸಿಕೊಂಡಿದ್ದಾನೆ ಎಂದು ಲಕ್ಷಮ್ಮರ ಮಗ ಸುಬ್ರಮಣಿ ಹೇಳಿದ್ದಾರೆ.
ಮೂರು ಎಕರೆ 17 ಗುಂಟೆ ಜಮೀನಿನಲ್ಲಿ ಲಕ್ಷಮ್ಮ ಹಲವು ವರ್ಷಗಳ ಹಿಂದೆ 10 ಗುಂಟೆ ಜಮೀನನ್ನ ಬೆಂಗಳೂರಿನ ಯಲಹಂಕ ಮೂಲದ ಮಾರ್ವಾಡಿ ರವಿಗೆ ಅಗ್ರಿಮೆಂಟ್ ಮಾಡಿಕೊಟ್ಟಿದ್ದರು. ಆದರೆ ಅದೇ 17 ಗುಂಟೆಯ ಆಗ್ರಿಮೆಂಟ್ ನಲ್ಲಿ 3 ಎಕರೆ 17 ಗುಂಟೆ ಅಂತ ತಿದ್ದುಪಡಿ ಮಾಡಿಕೊಂಡಿದ್ದು, ಈಗ ಮಾರ್ವಾಡಿ ರವಿ ಆ ಎಲ್ಲಾ ಜಮೀನು ನನ್ನದೇ ಅಂತ ಪವರ್ ಗ್ರಿಡ್ ಅಧಿಕಾರಿಗಳಿಗೆ ದಾಖಲೆ ಕೊಟ್ಟು ಹಣ ಲಪಟಾಯಿಸಿದ್ದಾನೆ ಅಂತ ಲಕ್ಷಮ್ಮಳ ಸಂಬಂಧಿಕರು ಆರೋಪಿಸುತ್ತಿದ್ದಾರೆ.
ಸದ್ಯಕ್ಕೆ ಪವರ್ ಗ್ರಿಡ್ ಅಧಿಕಾರಿಗಳು ಹಾಗೂ ಲಕ್ಷಮ್ಮನವರ ಕುಟುಂಬದವರು ಮಾರ್ವಾಡಿ ರವಿ ಮೋಸದ ವಿರುದ್ಧ ವಿಶ್ವನಾಥಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈಗ ಲಕ್ಷಮ್ಮ ಹಾಗೂ ಕುಟುಂಬದವರು ಕೂಡ 80 ಲಕ್ಷ ರೂ. ಹಣಕ್ಕಾಗಿ ಈಗ ಪೊಲೀಸ್ ಠಾಣೆ ಮತ್ತು ಕೋರ್ಟ್ ಕಚೇರಿ ಅಂತ ಅಲೆಯುವಂತಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv