ಶಿವಮೊಗ್ಗ: ಪವಿತ್ರ ಹಜ್ ಯಾತ್ರೆ ಹೆಸರಿನಲ್ಲಿ ನೂರಾರು ಮಂದಿ ಮಲೆನಾಡಿಗರಿಗೆ ತೂಬ ಇಂಟರ್ ನ್ಯಾಷನಲ್ ಟ್ರಾವೆಲ್ಸ್ ಮಾಲೀಕನೋರ್ವ ಮಹಾ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹಗಲು ರಾತ್ರಿ ಕಷ್ಟಪಟ್ಟು ದುಡಿದು ಕೂಡಿಟ್ಟಿದ್ದ ಬಡವರ ಹಣವನ್ನು ಪವಿತ್ರ ಹಜ್ ಯಾತ್ರೆ ಹೆಸರಿನಲ್ಲಿ ಟ್ರಾವೆಲ್ಸ್ ಮಾಲೀಕ ಮುಜಾಕೀರ್ ಲೂಟಿ ಮಾಡಿದ್ದಾನೆ. ಹಜ್ ಯಾತ್ರೆಗೆ ಕರೆದುಕೊಂಡು ಹೋಗುವುದಾಗಿ ಅಮಾಯಕರಿಂದ ಲಕ್ಷಾಂತರ ರೂ. ಪಡೆದು ಪಂಗನಾಮ ಹಾಕಿದ್ದಾನೆ. ಆದರೆ ಇದೀಗ ಹಣ ಕಳೆದುಕೊಂಡವರು ಅತ್ತ ಹಜ್ ಯಾತ್ರೆಗೂ ಹೋಗಲಾರದೆ, ಇತ್ತ ಹಣ ಕಳೆದುಕೊಂಡು ಮೋಸ ಹೋಗಿ ಧರ್ಮ ಸಂಕಟಕ್ಕೆ ಸಿಲುಕಿಕೊಂಡಿದ್ದಾರೆ.
ವಯಸ್ಸಾದ ಅಮಾಯಕರನ್ನು ಹಜ್ ಯಾತ್ರೆಗೆ ಕಳುಹಿಸುವುದಾಗಿ ನಂಬಿಸಿ ಅವರಿಂದ ಲಕ್ಷಾಂತರ ರೂ. ಪೀಕಿರುವ ಖದೀಮ ಧಾರ್ಮಿಕ ಭಾವನೆಗಳ ಜೊತೆ ಚೆಲ್ಲಾಟವಾಡಿದ್ದಾನೆ. ಹಜ್ ಯಾತ್ರಿಕರಿಗೆ ಮೋಸ ಎಸಗಿದ್ದಾನೆ. ಈ ಬಗ್ಗೆ ಮೋಸ ಹೋದವರು ದೊಡ್ಡಪೇಟೆ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಪೊಲೀಸರು ಮುಜಾಕ್ಕೀರ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈತ ಕೇವಲ ಶಿವಮೊಗ್ಗದಲ್ಲಷ್ಟೇ ಅಲ್ಲದೆ ರಾಜ್ಯದ ಇತರೆ ಜಿಲ್ಲೆಗಳಲ್ಲೂ ಮೋಸ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.