ಭುವನೇಶ್ವರ: ವ್ಯಕ್ತಿಯೊಬ್ಬ ಪತ್ನಿಯನ್ನು ಕೌಟುಂಬಿಕ ನ್ಯಾಯಾಲಯದ ಕಟ್ಟಡದಲ್ಲಿ ಕತ್ತಿಯಿಂದ ಕೊಲೆ ಮಾಡಿರುವ ಘಟನೆ ಒಡಿಶಾದ ಸಂಬಲ್ಪುರ್ ದಲ್ಲಿ ನಡೆದಿದೆ.
ಈ ಘಟನೆ ಸೋಮವಾರ ಸಂಬಲ್ಪುರದಲ್ಲಿರುವ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದಿದ್ದು, ಸಂಜಿತಾ ಚೌಧರಿ (18) ಮೃತ ದುರ್ದೈವಿ. ಆರೋಪಿ ಸಂಬಲ್ಪುರದ ಸಿಂದುರ್ ಪಾಂಕ್ ನ ನಿವಾಸಿ ರಮೇಶ್ ಕುಂಭಾರ್ ಈ ಹತ್ಯೆ ಮಾಡಿದ್ದಾನೆ. ಘಟನೆಯಲ್ಲಿ ಆಕೆಯ ತಾಯಿ ಮತ್ತು ಸೋದರ ಸೊಸೆಯ ಮೇಲೂ ಹಲ್ಲೆ ನಡೆದಿದೆ. ಸದ್ಯಕ್ಕೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ವಿವರ?: ಸಂಜಿತಾ ತನ್ನ ಪೋಷಕರ ಜೊತೆ ಪತಿಯೊಂದಿಗೆ ಸಂಧಾನಕ್ಕಾಗಿ ನ್ಯಾಯಾಲಯಕ್ಕೆ ಬಂದಿದ್ದರು. ಸಂಜಿತಾ ಮದುವೆಯಾದ ಕೆಲವೇ ತಿಂಗಳುಗಳ ನಂತರ ಆಕೆಯ ಪೋಷಕರ ಮನೆಗೆ ಹಿಂದಿರುಗಿದ್ದರು ಎಂದು ತಿಳಿದು ಬಂದಿದೆ.
ಸಂಜಿತಾ ಕಳೆದ ವರ್ಷ ರಮೇಶ್ ಜೊತೆ ಓಡಿಹೋಗಿ ಮದುವೆಯಾಗಿದ್ದಳು. ನಂತರ ಆತನ ಜೊತೆಯಲ್ಲಿಯೇ ಹಲವು ತಿಂಗಳು ವಾಸಿಸುತ್ತಿದ್ದಳು. ಆದರೆ ಆಕೆ ಪತಿಯ ಕಿರುಕುಳ ತಾಳಲಾಗದೇ ವಾಪಸ್ ನಮ್ಮ ಮನೆಗೆ ಬಂದಿದ್ದಳು ಎಂದು ಪೋಷಕರು ಹೇಳಿದ್ದಾರೆ. ಇತ್ತ ರಮೇಶ್ ತನ್ನ ಪತ್ನಿ ಮನೆಗೆ ಹಿಂದಿರುಗಬೇಕೆಂದು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದನು.
ಸಂಧಾನಕ್ಕೆಂದು ಸೋಮವಾರ ಎಲ್ಲರು ನ್ಯಾಯಾಲಯಕ್ಕೆ ಬಂದಿದ್ದಾರೆ. ಆದರೆ ರಮೇಶ್ ಏಕಾಏಕಿ ಕತ್ತಿಯಿಂದ ಸಂಜಿತಾ ಮತ್ತು ಅವರ ಕುಟುಂಬದ ಸದಸ್ಯರ ಮೇಲೆ ಕೋರ್ಟ್ ನ ಆವರಣದಲ್ಲಿ ಹಲ್ಲೆ ಮಾಡಿದ್ದಾನೆ. ಸಂಜಿತಾ ದಾಳಿಯಿಂದ ತಪ್ಪಿಸಿಕೊಳ್ಳಲು ನ್ಯಾಯಾಲಯದ ಕಟ್ಟಡದೊಳಗೆ ಓಡಿ ಹೋಗಿದ್ದಾರೆ. ಆದರೆ ರಮೇಶ್ ಅವಳನ್ನು ಓಡಿಸಿಕೊಂಡು ಹೋಗಿ ಹಲ್ಲೆ ಮಾಡಿದ್ದಾನೆ.
ನಂತರ ಸಂಜಿತಾ ತಂದೆ ಸೂಡಾನ್ ಚೌಧರಿ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದ್ದಾನೆ. ಆದರೆ ಅವರು ಕೋರ್ಟ್ ನ ಒಂದು ರೂಮಿನೊಳಗೆ ಹೋಗಿ ತಪ್ಪಿಸಿಕೊಂಡಿದ್ದಾರೆ. ನಂತರ ನ್ಯಾಯಾಲಯದಲ್ಲಿ ಉಪಸ್ಥಿತರಿದ್ದ ಜನರು ಆರೋಪಿ ರಮೇಶ್ ನ ಹಿಡಿದು ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಘಟನೆಯಿಂದ ಗಾಯಗೊಂಡವರನ್ನು ಸಮೀಪದ ಸಂಬಲ್ಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸಂಜಿತಾ ಸ್ಥಿತಿ ಗಂಭೀರವಾಗಿದ್ದರಿಂದ ಬರ್ಲಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜಿತಾ ಮೃತಪಟ್ಟಿದ್ದಾರೆ. ಸದ್ಯಕ್ಕೆ ಆರೋಪಿ ರಮೇಶ್ ನ ಬಂಧಿಸಿ ಆತನ ಕೈಯಲ್ಲಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಂಬಲ್ಪುರ ಉಪವಿಭಾಗದ ಪೊಲೀಸ್ ಅಧಿಕಾರಿ ಮಿಹಿರ್ ಪಾಂಡ ತಿಳಿಸಿದ್ದಾರೆ.