ಲಕ್ನೋ: ವೃದ್ಧ ವ್ಯಕ್ತಿಯೊಬ್ಬ ತನ್ನ ಮೃತ ಹೆಂಡತಿಯನ್ನ ಬುದುಕಿಸುತ್ತೀನಿ ಅಂತ ನಾಯಿಮರಿ ಹಾಗೂ ಹಾವುಗಳನ್ನ ತಿನ್ನುತ್ತಿದ್ದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ.
ನಾಯಿ ಮತ್ತು ಹಾವನ್ನು ತಿನ್ನುತ್ತೇನೆಂದು ಹೇಳಿದ ವೃದ್ಧನಿಗೆ ಸಾರ್ವಜನಿಕರು ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ. ಉತ್ತರಪ್ರದೇಶದ ಜಗದೀಶ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಿಕಾಸ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ನೌರಂಗಿ ಲಾಲ್ ಎಂಬ ಹೆಸರಿನ ಬಾಬಾ ಕೆಲ ಸಮಯದಿಂದ ಇಲ್ಲಿನ ಬೀದಿಯಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದ. ನಾಯಿಗಳನ್ನ ಬಲಿ ಕೊಟ್ಟು ಅದರ ಮಾಂಸವನ್ನ ತಿನ್ನುತ್ತಿದ್ದ. ಈ ರೀತಿ ಮಾಡೋದ್ರಿಂದ ನನಗೆ ಶಕ್ತಿ ಬರುತ್ತದೆ. ನಾನು ಹಾವುಗಳನ್ನೂ ಕೂಡ ತಿಂದಿದ್ದೇನೆ ಎಂದು ಆ ವ್ಯಕ್ತಿ ಹೇಳಿದ್ದಾನೆ. ಈವರೆಗೆ ಈತ ನಾಲ್ಕು ನಾಯಿಮರಿಗಳನ್ನ ತಿಂದಿದ್ದಾನೆ. ಗುಡಿಸಲಿನಲ್ಲಿ ನಾಯಿಮರಿಗಳನ್ನ ಸುಟ್ಟಿರುವುದು ಪತ್ತೆಯಾಗಿದೆ.
ವ್ಯಕ್ತಿಯ ಬಾಯಿಯಿಂದ ಈ ಮಾತುಗಳು ಹೊರಬರುತ್ತಿದ್ದಂತೆ ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ವ್ಯಕ್ತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಾರ್ವಜನಿಕರು ಬಾಬಾ ನ ಗುಡಿಸಲಿಗೆ ಬೆಂಕಿ ಹಚ್ಚಿದ್ದಾರೆ.
ಈ ಬಗ್ಗೆ ಮನೋವೈದ್ಯರೊಬ್ಬರು ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ಕೆಲವೊಮ್ಮೆ ಒಂಟಿಯಾಗಿರುವವರು ತಮ್ಮ ಕಲ್ಪನಾ ಲೋಕದಲ್ಲಿ ಜೀವಿಸುತ್ತಿರುತ್ತಾರೆ. ನೈಜ ಜಗತ್ತಿಗೂ ತಮ್ಮ ಮನಸ್ಸಿನಲ್ಲಿ ನಿರ್ಮಿಸಿಕೊಂಡಿರುವ ಕಲ್ಪನಾ ಜಗತ್ತಿಗೂ ವ್ಯತ್ಯಾಸ ಗುರುತಿಸುವಲ್ಲಿ ವಿಫಲರಾಗುತ್ತಾರೆ. ಇಂತಹವರಿಗೆ ಚಿಕಿತ್ಸೆ ನೀಡಬಹುದು ಎಂದು ಹೇಳಿದ್ದಾರೆ.
ಆರೋಪಿ ವ್ಯಕ್ತಿಯ ಮಾನಸಿಕ ಸ್ಥಿತಿ ಚೆನ್ನಾಗಿಲ್ಲ. ಸದ್ಯ ಆತನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ. ಪ್ರಕರಣದ ಸಂಬಂಧ ತಜ್ಞ ವೈದ್ಯರನ್ನ ಸಂಪರ್ಕಿಸಿದ ನಂತರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.