ಶಿವಮೊಗ್ಗ: ವಿಧವೆಯನ್ನು ಮದುವೆ ಆಗಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರು ಮರಕ್ಕೆ ಕಟ್ಟಿಹಾಕಿ ಥಳಿಸಿದ ಅಮಾನವೀಯ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ಸಾಗರ ತಾಲೂಕಿನ ಸುಭಾಷ್ ನಗರ ನಿವಾಸಿ ರಮೇಶ್ಗೆ ಮುತ್ತಲಬೈಲು ಗ್ರಾಮಸ್ಥರು ಮನಸೋ ಇಚ್ಛೆ ಥಳಿಸಿದ್ದಾರೆ. ರಮೇಶ್ ಹಣ್ಣು ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಸಾಗರದ ಗಾರ್ಮೆಂಟ್ನಲ್ಲಿ ಕೆಲಸ ಮಾಡುತ್ತಿದ್ದ ಮುತ್ತಲಬೈಲು ಗ್ರಾಮದ ನಿವಾಸಿ ಶೀಲಾಳನ್ನು ಇತ್ತೀಚಿಗೆ ರಮೇಶ್ ಪ್ರೀತಿಸಿ ಮದುವೆಯಾಗಿದ್ದರು.
ರಮೇಶ್ ಮೊದಲ ಬಾರಿಗೆ ಪತ್ನಿ ಊರಿಗೆ ಹೋಗಾದ ಗ್ರಾಮಸ್ಥರು ಅವರನ್ನ ಕಂಬಕ್ಕೆ ಕಟ್ಟಾಕಿ, ಗೂಸ ಕೊಟ್ಟಿದ್ದಾರೆ. ಶೀಲಾ ಅವರಿಗೆ ಈ ಮೊದಲೇ ಮದುವೆ ಆಗಿ ಇಬ್ಬರು ಮಕ್ಕಳಿದ್ದು, ಅವರ ಮೊದಲ ಗಂಡ ಮೃತಪಟ್ಟಿದ್ದರು. ಮದುವೆಯಾದ ನಂತರ ಮಕ್ಕಳನ್ನು ನೋಡಲು ಶೀಲಾ ಹಳೆಯ ಪತಿ ಊರಿಗೆ ಬಂದಿದ್ದಾರೆ. ದಂಪತಿ ನೋಡಿದ ಗ್ರಾಮಸ್ಥರು ಇಬ್ಬರನ್ನು ಥಳಿಸಿದ್ದಾರೆ.
ಮಕ್ಕಳಿದ್ದ ವಿಷಯವನ್ನು ತಿಳಿಸದೇ ರಮೇಶ್ ಅವರನ್ನು ಶೀಲಾ ಮದುವೆಯಾಗಿ ಮೋಸ ಮಾಡಿದ್ದಾಳೆ ಎಂದು ಗ್ರಾಮಸ್ಥರು ಆರೋಪಿಸಿ ಹಲ್ಲೆ ನಡೆಸಿದ್ದಾರೆ.
ರಮೇಶನನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಿ, ಅದನ್ನ ವಿಡಿಯೋ ಮಾಡಿ, ಅವರಿಂದ ಒತ್ತಾಯವಾಗಿ ಗ್ರಾಮಸ್ಥರು ಹೇಳಿಕೆ ಪಡೆದಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ಹಾಗೆಯೇ ಗ್ರಾಮಸ್ಥರಿಂದ ಹಲ್ಲೆ ನಡೆದ ಬಳಿಕ ನವ ದಂಪತಿ ನಾಪತ್ತೆ ಆಗಿದ್ದಾರೆ ಎಂದು ರಮೇಶ್ ಸ್ನೇಹಿತರು ತಿಳಿಸಿದ್ದಾರೆ.