ದಾವಣಗೆರೆ: ಪೊಲೀಸರ ಮೇಲೆ ಹಲ್ಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬಯಲಿಗೆ ಬಂದಿದೆ.
ದಾವಣಗೆರೆಯ ಆರ್ ಟಿಒ ಸರ್ಕಲ್ ಬಳಿ ಉತ್ತರ ಸಂಚಾರಿ ಠಾಣೆಯ ಎಎಸ್ಐ ರಾಮಚಂದ್ರಪ್ಪ ಹಾಗೂ ಮುಖ್ಯ ಪೇದೆ ತಿಪ್ಪೇಶ್ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಅದೇ ರಸ್ತೆಯಲ್ಲಿ ಬೈಕಿನಲ್ಲಿ ಬಂದ ಸೀಮೆಎಣ್ಣೆ ಹೇಮಣ್ಣ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಪೊಲೀಸರಿಗೆ ಬುಧವಾರ ಕೊಟ್ಟ ಹೊಡೆತ ಇನ್ನೂ ಸಾಕಾಗಿಲ್ಲ ಅಂತ ಅನ್ನಿಸುತ್ತೆ ಅದಕ್ಕೆ ಮತ್ತೆ ಗಾಡಿ ಹಿಡಿಯುತ್ತಿದ್ದಾರೆ ಎಂದು ಅಣಕಿಸಿದ್ದಾನೆ. ಇದರಿಂದ ಪೊಲೀಸ್ ಸಿಬ್ಬಂದಿ ಮಾತನಾಡದೇ ಸುಮ್ಮನೇ ಫೈನ್ ಕಟ್ಟಿ ಹೋಗಿ ಎಂದು ಹೇಳಿದ್ದೇ ತಡ ಹೆಲ್ಮೇಟ್ ನಿಂದ ಪೊಲೀಸರಿಬ್ಬರಿಗೂ ಹಲ್ಲೆ ನಡೆಸಿದ್ದಾನೆ.
ಪೊಲೀಸರು ಕೂಡಲೇ ಹಲ್ಲೆ ನಡೆಸಿದ ಹೇಮಣ್ಣನನ್ನು ಬಸವನಗರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಹಲ್ಲೆಗೊಳಗಾದ ಪೊಲೀಸರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಸದ್ಯ ಬಸವನಗರ ಪೊಲೀಸ್ ಠಾಣೆಗೆ ಎಸ್ಪಿ ಆರ್. ಚೇತನ್ ಭೇಟಿ ನೀಡಿ ಪರಿಶೀಲನೆ ನಡೆಸಿ ನಗರ ಡಿವೈಎಸ್ಪಿಗೆ ತನಿಖೆಗೆ ಆದೇಶ ನೀಡಿದರು.
ಇತ್ತೀಚೆಗೆ ಜಿಲ್ಲೆಯ ಹದಡಿ ರೋಡ್ ಬಳಿ ಕುಡುಕನೊಬ್ಬ ನಡುರಸ್ತೆಯಲ್ಲೇ ಟ್ರಾಫಿಕ್ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದನು. ಕಂಠಪೂರ್ತಿ ಕುಡಿದಿದ್ದ ರುದ್ರೇಶ್ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದನು. ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಪೊಲೀಸರು ಹದಡಿ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ರುದ್ರೇಶ್ ಬೈಕನ್ನು ಪೊಲೀಸರು ತಡೆದು ನಿಲ್ಲಿಸಿದ್ದರು. ಇದಕ್ಕೆ ಸಿಟ್ಟಾದ ರುದ್ರೇಶ್ ಎಎಸ್ಐ ಅಂಜಿನಪ್ಪ, ಪೇದೆ ಸಿದ್ದೇಶ್, ಹಾಗೂ ಮುಖ್ಯ ಪೇದೆ ನಾರಾಯಣರಾಜ್ ಅರಸು ಮೇಲೆ ಹಲ್ಲೆ ಮಾಡಿದ್ದನು. ಅಲ್ಲದೇ ರಸ್ತೆ ಬದಿ ವ್ಯಾಪಾರ ನಡೆಸಿದ್ದ ತರಕಾರಿ ಹಾಗೂ ಗೊಂಬೆಗಳನ್ನು ಎತ್ತಿ ಪೊಲೀಸ್ ಪೇದೆಗಳ ಮೇಲೆ ದಾಳಿ ನಡೆಸಿದ್ದನು. ಮುಖ್ಯ ಪೇದೆ ಅರಸು ಅವರ ಹಣೆಗೆ ಬಲವಾದ ಪೆಟ್ಟು ಬಿದ್ದಿದ್ದು ಈಗ ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಸಿದ್ದಾರೆ.
ಹಲ್ಲೆ ನಡೆಸಿದ ರುದ್ರೇಶ್ ವಕೀಲ ವೃತ್ತಿ ನಡೆಸುತ್ತಿರುವುದಾಗಿ ಮಾಹಿತಿ ಲಭ್ಯವಾಗಿದ್ದು, ಕೆಟಿಜೆ ನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=MyojsAvB18c