ಬೆಂಗಳೂರು: ಪ್ರೇಯಸಿಗೆ ಗಿಫ್ಟ್ ಕೊಡಿಸುವುದಕ್ಕೆ ಹೋಗಿ ಜ್ಯುವೆಲ್ಲರಿ ಶಾಪ್ ನಲ್ಲಿ ಚಿನ್ನದ ಸರ ಎಗರಿಸಿದ್ದ ಪ್ರಿಯತಮ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ನಿವಾಸಿ ಅಬ್ದುಲ್ ಮುಬಾರಕ್ ಬಂಧಿತ ಆರೋಪಿ. ಈತ ತೆಲಂಗಾಣದಲ್ಲಿ ಎಕ್ಸೈಸ್ ಸೂಪರಿಂಟೆಂಡೆಂಟ್ ಅಂತ ಹೇಳಿ ಯುವತಿಗೆ ಮೋಸ ಮಾಡಿದ್ದಾನೆ. ಈಗ ಈತನ ವಿರುದ್ಧ ಬಸವನಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಘಟನೆ ವಿವರ:
ಮುಬಾರಕ್ ನಾನು ದೊಡ್ಡ ಕಂಪೆನಿಯಲ್ಲಿ ಕೆಲಸ ಮಾಡುತ್ತೇನೆ ಯುವತಿಗೆ ಹೇಳಿದ್ದ. ಈತನ ಮಾತನ್ನು ನಂಬಿದ ಯುವತಿ ಈತನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಳು. ಬಳಿಕ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಮುಬಾರಕ್ ಮದುವೆ ಆಗೋಣ ಅಂತ ಯುವತಿಗೆ ನಂಬಿಸಿದ್ದಾನೆ. ಅದರಂತೆಯೇ ಮದುವೆಗೆ ಆಭರಣ ಖರೀದಿ ಮಾಡಲು ಇಬ್ಬರು ಬಸವನಗುಡಿಯ ನಾಕೋಡಾ ಜ್ಯುವೆಲ್ಲರಿ ಶಾಪಿಗೆ ಹೋಗಿದ್ದಾರೆ. ಈ ವೇಳೆ ಮುಬಾರಕ್ ಟ್ರಯಲ್ ನೋಡುತ್ತೇನೆ ಎಂದು ಚಿನ್ನದ ಸರವನ್ನು ಕತ್ತಿಗೆ ಹಾಕಿಕೊಂಡಿದ್ದಾನೆ. ನಂತರ ತನ್ನ ಸ್ನೇಹಿತರಿಗೆ ಕರೆ ಮಾಡುತ್ತೇನೆ ಎಂದು ಪ್ರೇಯಸಿಯ ಬಳಿ ಐಫೋನ್ ತೆಗೆದು ಕೊಂಡಿದ್ದಾನೆ.
ಪ್ರೇಯಸಿಯ ಐಫೋನ್ ತೆಗೆದುಕೊಂಡು ಜ್ಯುವೆಲ್ಲರಿ ಅಂಗಡಿಯಿಂದ ಹೊರ ಬಂದು ಆತ ಚಿನ್ನದ ಸರ ಮತ್ತು ಫೋನಿನೊಂದಿಗೆ ಪರಾರಿಯಾಗಿದ್ದಾನೆ. ಇತ್ತ ಆರೋಪಿ ಮುಬಾರಕ್ ಪರಾರಿಯಾದ ತಕ್ಷಣ ನಿಮ್ಮ ಗಂಡ ಚಿನ್ನದ ಸರ ತೆಗೆದುಕೊಂಡು ಹೋಗಿದ್ದಾನೆ ಎಂದು ಜ್ಯುವೆಲ್ಲರಿ ಸಿಬ್ಬಂದಿ ಯುವತಿಯನ್ನು ಸೆರೆ ಹಿಡಿದಿದ್ದಾರೆ. ಈ ವೇಳೆ ಅವನು ಗಂಡ ಅಲ್ಲ, ಮದುವೆಯಾಗುತ್ತೀನಿ ಎಂದು ನಂಬಿಸಿ ಆಭರಣ ತೆಗೆದುಕೊಳ್ಳಲು ಅಂಗಡಿಗೆ ಕರೆದುಕೊಂಡು ಬಂದಿದ್ದ. ಈ ವೇಳೆ ಈ ಕೃತ್ಯವನ್ನು ಎಸಗಿದ್ದಾನೆ ಎಂದು ಯವತಿ ತಿಳಿಸಿದ್ದಾಳೆ.
ಜ್ಯವೆಲ್ಲರಿ ಸಿಬ್ಬಂದಿ ಈ ಬಗ್ಗೆ ಬಸವನಗುಡಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದು ವಿಚಾರಣೆ ಮಾಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಹಿಡಿದು ಬಂಧಿಸಿದ್ದಾರೆ.