ಉಡುಪಿ: ಎರಡನೇ ಬಾರಿಗೆ ನರೇಂದ್ರ ಮೋದಿ ಅವರು ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದು, ಈ ನಡುವೆ ಉಡುಪಿ ಜಿಲ್ಲೆಯ ಕುಂದಾಪುರದ ಮರಳು ಶಿಲ್ಪ ಕಲಾವಿದ ಹರೀಶ್ ಸಾಗಾ ಅವರ ತಂಡ ಪ್ರಧಾನಿ ಮೋದಿಗೆ ವಿಭಿನ್ನವಾಗಿ ವಿಶ್ ಮಾಡಿದ್ದಾರೆ.
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸ್ಲೋಗನ್ ಅಡಿಯಲ್ಲಿ ರಚಿಸಿದ ಮರಳು ಶಿಲ್ಪ ಮಲ್ಪೆ ಕಡಲ ತೀರದ ಪ್ರವಾಸಿಗರನ್ನು ಆಕರ್ಷಿಸಿತು. ಅನೇಕ ಪ್ರವಾಸಿಗರು ಮೋದಿ ಅಭಿಮಾನಿಗಳು ಮರಳು ಶಿಲ್ಪದ ಎದುರು ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡರು. ಮರಳ ಶಿಲ್ಪದಲ್ಲಿ ಸಂಸದ್ ಭವನ, ಪ್ರಧಾನಿ ಮೋದಿಯನ್ನು ರಚಿಸಲಾಗಿದ್ದು ಬಹಳ ಆಕರ್ಷಕವಾಗಿದೆ.
ಸಂಜೆ ಸೂರ್ಯಾಸ್ತ ನೋಡಲು ಬಂದ ಪ್ರವಾಸಿಗರಿಗೆ ಮರಳುಶಿಲ್ಪ ನೋಡುವ ಅವಕಾಶ ಸಿಕ್ಕಿದೆ. ಕಲಾವಿದ ಹರೀಶ್ ಸಾಗಾ ಮಾತನಾಡಿ, ನರೇಂದ್ರ ಮೋದಿ ಬಹುಮತದಿಂದ ಗೆದ್ದಿದ್ದಾರೆ. ಮೊದಲ ಭಾಷಣದಲ್ಲಿ ಎಲ್ಲರ ಜೊತೆಯಾಗಿದ್ದು, ಎಲ್ಲರ ಅಭಿವೃದ್ಧಿ ಮಾಡುತ್ತಾ, ಎಲ್ಲರ ವಿಶ್ವಾಸ ಗಳಿಸುವ ಘೋಷಣೆ ಮಾಡಿದ್ದಾರೆ. ಇದು ಉತ್ತಮ ಬೆಳವಣಿಗೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಮುಂಚೂಣಿಗೆ ಬರಲಿ. ಪ್ರಬಲ ದೇಶವಾಗಿ ಬೆಳೆಯಲಿ ಎಂಬ ಉದ್ದೇಶದಿಂದ ಈ ಆರ್ಟ್ ಮಾಡಿರುವುದಾಗಿ ಹೇಳಿದರು.