ಕಲಬುರಗಿ: ಮಂಡ್ಯದ ಜನರು ನಿಖಿಲ್ ಕುಮಾರಸ್ವಾಮಿಗೆ ಬತ್ತಿ ಇಟ್ಟು ಕಳುಹಿಸಿದ್ದಾರೆ ಎಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೆದಾರ್ ವ್ಯಂಗ್ಯವಾಡಿದ್ದಾರೆ.
ಬಿಜೆಪಿಯ ಅಭಿನಂದನಾ ಸಮಾವೇಶದಲ್ಲಿ ಮಾಜಿ ಸಚಿವ ಮಾಲೀಕಯ್ಯ ಗುತ್ತೆದಾರ್ ಭಾಗಿಯಾಗಿದ್ದರು. ಈ ವೇಳೆ ಅವರು ಚುನಾವಣೆಯ ಬಳಿಕ ಕುಮಾರಸ್ವಾಮಿ ಕಲಬುರಗಿಗೆ ಬಂದಿದ್ದರು ಎಂದು ಹೇಳುತ್ತಾ ಅಫಜಲಪುರದಲ್ಲಿ ನಿಖಿಲ್ ಎಲ್ಲಿದ್ದಿಯಪ್ಪ ಘಟನೆ ನೆನಪಿಸಿಕೊಂಡರು.
ಚುನಾವಣೆಯ ಬಳಿಕ ಕುಮಾರಸ್ವಾಮಿ ಕಲಬುರಗಿಗೆ ಬಂದಿದ್ದರು. ಆಗ ದತ್ತನ ಸನ್ನಿಧಿಯಲ್ಲಿ ನಿಖಿಲ್ ಎಲ್ಲಿದ್ದಿಯಪ್ಪಾ ಎಂದು ಅರ್ಚಕರು ಕರೆದಿದ್ದರು. ಅರ್ಚಕರು ನಿಖಿಲ್ ಎಲ್ಲಿದ್ದಿಯಪ್ಪ ಎಂದು ಕರೆದಿದ್ದಕ್ಕೆ ಕುಮಾರಸ್ವಾಮಿ ದಂಗಾಗಿ ನಿಖಿಲ್ ಇಲ್ಲಿಗೆ ಎಲ್ಲಿಂದ ಬಂದ ಎಂದು ನೋಡೋಕ್ಕೆ ಮುಂದಾಗಿದ್ದರು. ಬಳಿಕ ಅರ್ಚಕರು ನನ್ನ ಮಗನ ಹೆಸರು ಕೂಡ ನಿಖಿಲ್ ಆತ ದೀಪದ ಬತ್ತಿ ತರೋಕೆ ಹೋಗಿದ್ದಾನೆ ಎಂದು ತಿಳಿಸಿದರು. ಆದರೆ ಮಂಡ್ಯದ ಜನರು ನಿಖಿಲ್ ಕುಮಾರಸ್ವಾಮಿ ಗೆ ಬತ್ತಿ ಇಟ್ಟು ಕಳುಹಿಸಿದ್ದಾರೆ ಎಂದು ಹೇಳಿ ಗುತ್ತೆದಾರ್ ವ್ಯಂಗ್ಯವಾಡಿದರು.
ಇದೇ ವೇಳೆ ಮಾತನಾಡಿದ ಅವರು, ಸೋಲಿಲ್ಲದ ಸರದಾನಿಗೆ ಮನೆಗೆ ಕಳುಹಿಸಿದ ಕಾರ್ಯಕರ್ತರಿಗೆ ಅಭಿನಂದನೆ ಹೇಳಲು ಇಷ್ಟಪಡುತ್ತನೆ. ಏಕೆಂದರೆ ಕಲಬುರಗಿ ಚುನಾವಣೆ ಹಿಂದಿಯ ಶೋಲೆ ಸಿನಿಮಾದ ತರಹ ಆಗಿದೆ. ಗಬ್ಬರ್ ಸಿಂಗ್ ನನ್ನು ಕೆಳಗೆ ಇಳಿಸಬೇಕಾಗಿತ್ತು. ಯಡಿಯೂರಪ್ಪ ಠಾಕೂರ್ ಸಿಂಗ್ ಇದ್ದ ಹಾಗೆ. ನಾನು ಅಮಿತಾಬ್ ಬಚ್ಚನ್ ಹಾಗೂ ಚಿಂಚನಸೂರ್ ಧರ್ಮೇಂದ್ರ ಇದ್ದ ಹಾಗೆ. ಕಾಂಗ್ರೆಸ್ನ ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್ ಸಾಂಬಾ ಇದ್ದ ಹಾಗೆ. ಅರೇ ಓ ಸಾಂಬಾ ಅಂತಾ ಖರ್ಗೆಗೆ ಗೆಲ್ಲಿಸೋದಕ್ಕೆ ಬಂದಿದ್ದ ಎಂದು ಹೇಳಿ ಟಾಂಗ್ ನೀಡಿದರು.