ಐದು ಗ್ಯಾರಂಟಿ ಸಿದ್ದರಾಮಯ್ಯ, ಡಿಕೆಶಿ, ಪರಂ ಮನೆಗೆ ಕೊಟ್ಟಿದ್ದಿವಾ?
– ಏ.. ಮಹದೇವಪ್ಪ ಸಿಎಂ ಕಿವಿ ತುಂಬ ಬೇಡ
ಮೈಸೂರು: ಸಿದ್ದರಾಮಯ್ಯ (Siddaramaiah) ಯಾವಾಗ ಹಣಕಾಸು ಸಚಿವರಾಗ್ತಾರೋ ಆಗ ಲಕ್ಷ್ಮಿ ಕುಂಟಾಗಿ ಖಜಾನೆಯಲ್ಲಿರುತ್ತಾಳೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿದ್ದಾರೆ.
ಮೈಸೂರಿನಲ್ಲಿ (Mysuru) ನಡೆದ ಸಾಧನ ಸಮಾವೇಶದಲ್ಲಿ (Sadhana Samavesha) ಅವರು ಮಾತನಾಡಿದರು. ಈ ವೇಳೆ, ಮೋದಿ ಅವರೇ ಕರ್ನಾಟಕಕ್ಕೆ ಬಂದು ನೋಡಿ. ಈ ನಾಡು ಎಷ್ಟು ಸುಭಿಕ್ಷವಾಗಿದೆ ಅಂತ. ಕರ್ನಾಟಕಕ್ಕೆ ಬಂಡವಾಳ ಹೂಡಿಕೆ ಮಾಡಲು ಹುಡುಕಿ ಹುಡುಕಿ ಜನ ಬರುತ್ತಿದ್ದಾರೆ. ಬಿಜೆಪಿಯವರು ಹೊಟ್ಟೆ ಕಿಚ್ಚಿಗೆ ಆರೋಪ ಮಾಡುತ್ತಾರೆ. ಹೊಟ್ಟೆ ಕಿಚ್ಚಿಗೆ ಮದ್ದಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಮಾಡಿರುವ ಅಭಿವೃದ್ಧಿಯನ್ನು ಮೋದಿ 1% ಕೂಡ ಮಾಡಿಲ್ಲ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ನಮ್ಮ ಸರ್ಕಾರ ದೇವರ ಮನೆಯಿದ್ದಂತೆ, ಸಿದ್ದರಾಮಯ್ಯ ನಮ್ಮೆಲ್ಲರ ನಾಯಕ: ಡಿಕೆಶಿ
ಯಾವುದೇ ಯೋಜನೆ ಇದ್ದರೂ, ಸಿದ್ದರಾಮಯ್ಯ ಅವರು ಮೊದಲ ಪ್ರಾಮುಖ್ಯತೆ ಕೊಡುವುದು ಮೈಸೂರಿಗೆ. ಮೈಸೂರಿನ ಮೇಲೆ ಸಿದ್ದರಾಮಯ್ಯ ಅವರಿಗೆ ಪ್ರೀತಿ ಜಾಸ್ತಿ. ಮೈಸೂರಿಗೆ ಯಾವಾಗಲೂ ಹಣದ ಹೊಳೆಯನ್ನು ಹರಿಸುತ್ತಾರೆ. ಬಿಜೆಪಿಯವರು ಟೀಕಾಚಾರಿಗಳು ಅಷ್ಟೇ. ಅಭಿವೃದ್ಧಿ ಕೆಲಸ ಮಾಡುವುದೇ ಇಲ್ಲ. ಬಿಜೆಪಿ (BJP) ಮಾಡುವುದು ಭ್ರಷ್ಟಾಚಾರ ಮಾತ್ರ. ಕಾಂಗ್ರೆಸ್ ಕ್ಯಾ ಕಿಯಾ ಎಂದು ಮೋದಿ ಅವರು ಪದೇ ಪದೇ ಕೇಳುತ್ತಾರೆ. ಕಾಂಗ್ರೆಸ್ ಈ ದೇಶಕ್ಕೆ ಕೊಟ್ಟ ಕೊಡುಗೆ ಜನರ ಕಣ್ಮುಂದೆ ಇದೆ ಎಂದಿದ್ದಾರೆ.
ಮೋದಿ ದಿನ ಟಿವಿಯಲ್ಲಿ ಮಾತ್ರ ಕಾಣ್ತಾರೆ
ಮೋದಿ (Narendra Modi) ಅವರು ದಿನ ಟಿವಿಯಲ್ಲಿ ಮಾತ್ರ ಕಾಣುತ್ತಾರೆ. ದಿನ ಪೂರ್ತಿ ಟಿವಿಯಲ್ಲಿ ಕಾಣಬೇಕು ಅಷ್ಟೆ ಅವರ ಉದ್ದೇಶ. ಹಿಂದೆ ಯಾವ ಪಿಎಂ ಕೂಡ ಇವರ ರೀತಿ ದಿನ ಬೆಳಗಾದರೆ ಟಿವಿಯಲ್ಲಿ ಬೊಗಳುತ್ತಿರಲಿಲ್ಲ. ಅಂದಾನಿ, ಅಂಬಾನಿಗೆ ದೇಶದ ಆಸ್ತಿಯನ್ನು ಮೋದಿ ಮಾರುತ್ತಿದ್ದಾರೆ. ದೇಶದ ಜನ ಸಂಕಷ್ಟದಲ್ಲಿ ಇದ್ದಾಗ ಮೋದಿ ವಿದೇಶ ಪ್ರವಾಸ ಮಾಡುತ್ತಾರೆ. ಮಣಿಪುರಕ್ಕೆ ಹೋಗಿ ಅಲ್ಲಿನ ಜನಕ್ಕೆ ಸಾಂತ್ವನ ಹೇಳಲಿಲ್ಲ. ಸಂವಿಧಾನ ಬದಲಾವಣೆ ಮಾಡಲು ಜನ ಅವಕಾಶ ಕೊಟ್ಟರೆ ಜನ ಸತ್ತಂತೆ. ಬಿಜೆಪಿ ಎಷ್ಟೇ ತಿಪ್ಪಾರಲಾಗ ಹಾಕಿದರೂ ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ. ಅಂಬೇಡ್ಕರ್ ಒಬ್ಬರೇ ಸಂವಿಧಾನ ಮಾಡಿದ್ದಾ ಅಂತಾ ಬಿಜೆಪಿ ಕೇಳುತ್ತೆ? ಅಂಬೇಡ್ಕರ್ ಅಲ್ಲದೆ ಏನೂ ಅವರ ತಾತಂದಿರು ಮಾಡಿದ್ರಾ? ಆರ್ಎಸ್ಎಸ್ ಅವರು ಮಾಡಿದ್ರಾ? ಸಂವಿಧಾನದ ಕೊಲೆಯನ್ನು ಮೋದಿ ಮಾಡುತ್ತಿದ್ದಾರೆ ಎಂದು ಗುಡುಗಿದರು.
ಕೋಟ್ಯಂತರ ಜನ ನಮ್ಮ ಪರ ಇದ್ದಾರೆ
ಕಾಂಗ್ರೆಸ್ ಕೆಲ ಕಡೆ ಸೋತಿರಬಹುದು. ಆದರೆ ಕೋಟ್ಯಂತರ ಜನ ನಮ್ಮ ಪರ ಇದ್ದಾರೆ. ನಮಗೂ ಬಿಜೆಪಿಗೂ ಇರೋದು 2% ಮತದ ವ್ಯತ್ಯಾಸ ಅಷ್ಟೆ. ಶಿವಕುಮಾರ್, ಸಿದ್ದರಾಮಯ್ಯ ಸೇರಿ ಲೋಕಸಭಾ ಚುನಾವಣೆಯಲ್ಲಿ ಇನ್ನೂ 10 ಸ್ಥಾನ ಕೊಟ್ಟಿದ್ದರೆ, ಬೇರೆ ಬೇರೆ ರಾಜ್ಯದಲ್ಲೂ ಎರಡು ಮೂರು ಸ್ಥಾನ ಹೆಚ್ಚು ಬಂದಿದ್ದರೆ ಮೋದಿ ಎಲ್ಲಿ ಅಧಿಕಾರಕ್ಕೆ ಬರುತ್ತಿದ್ದರು? ಮೋದಿ ಅಹಂಕಾರ, ದುರಹಂಕಾರ ಇರೋ ಮನುಷ್ಯ. ಒಂದಲ್ಲ ದಿನ ಕೆಳಗೆ ಬೀಳಬೇಕು. ಬೀಳುತ್ತಾರೆ ನೋಡಿ ಎಂದು ಭವಿಷ್ಯ ನುಡಿದಿದ್ದಾರೆ.
ಐದು ಗ್ಯಾರಂಟಿ ಬರೀ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಪರಮೇಶ್ವರ್ ಮನೆಗೆ ಕೊಟ್ಟಿದ್ದಿವಾ? ಇಷ್ಟು ಅಭಿವೃದ್ಧಿ ಕಾರ್ಯ, ಗ್ಯಾರಂಟಿ ಕೊಟ್ಟ ಮೇಲೂ ನಮ್ಮವರೆ ಕೆಲವರು ಅಭಿವೃದ್ಧಿ ಆಗ್ತಿಲ್ಲ ಅಂತಾರೆ? ಯಾಕೆ ಅಂತಾನೆ ಗೊತ್ತಾಗಲ್ಲ. ಈ ಸರ್ಕಾರ ದಿವಾಳಿ ಆಗಿದೆ ಎಂದು ಸುಳ್ಳು ಹಬ್ಬಿಸಿದ್ದಾರೆ. ಈ ಸರ್ಕಾರ ದಿವಾಳಿ ಆಗಿಲ್ಲ. ದಿವಾಳಿ ಆಗಿದ್ದರೆ ಶಾಸಕರಿಗೆ 50 ಕೋಟಿ ರೂ. ಅನುದಾನ ಕೊಡುತ್ತಿದ್ದರಾ? ಸಿದ್ದರಾಮಯ್ಯ ಯಾವಾಗ ಹಣಕಾಸು ಸಚಿವರಾಗುತ್ತಾರೋ ಆಗ ಲಕ್ಷ್ಮಿ ಕುಂಟಾಗಿ ಖಜಾನೆಯಲ್ಲಿ ಕೂರುತ್ತಾಳೆ. ಮೋದಿ ಗ್ಯಾರಂಟಿ ಒಂದೇ ಅದು ಸುಳ್ಳು. ಮೋದಿ ಬಳಿ ಇರೋದು ಸುಳ್ಳಿನ ಗ್ಯಾರಂಟಿ ಮಾತ್ರ. ಕಾಂಗ್ರೆಸ್ ಗ್ಯಾರಂಟಿ ನಿಜವಾದ ಗ್ಯಾರಂಟಿ. ಇವು ಬದುಕಿನ ಗ್ಯಾರಂಟಿ ಎಂದಿದ್ದಾರೆ.
ಭಾಷಣದ ವೇಳೆ ಸಿದ್ದರಾಮಯ್ಯ ಜೊತೆ ಮಾತಾಡಿದ ಮಹದೇವಪ್ಪರನ್ನು ಗಮನಿಸಿ, ಏ.. ಮಹದೇವಪ್ಪ ಸಿಎಂ ಕಿವಿ ತುಂಬ ಬೇಡ. ಅವರ ಕಿವಿ ಚೆನ್ನಾಗಿದೆ. ಅವರಿಗೆ ನನ್ನ ಮಾತು ಕೇಳೋಕೆ ಬಿಡು ಎಂದು ಕಾಲೆಳೆದಿದ್ದಾರೆ. ಇದನ್ನೂ ಓದಿ: ಜು.23-26ರವರೆಗೆ ಪ್ರಧಾನಿ ಮೋದಿ ಬ್ರಿಟನ್, ಮಾಲ್ಡೀವ್ಸ್ಗೆ ಭೇಟಿ