ನವದೆಹಲಿ: ಕಾರ್ಗಿಲ್ ವಿಜಯ್ ದಿವಸ್ (Kargil Vijay Diwas) ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ಡ್ರಾಸ್ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ ಬಳಿಕ ಮೋದಿ ಅಗ್ನಿಪಥ್ ಯೋಜನೆ ಕುರಿತು ವಿಪಕ್ಷಗಳ ಟೀಕೆಗೆ ಟಾಂಗ್ ಕೊಟ್ಟಿದ್ದರು. ಸೇನೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಮೋದಿ ಹೇಳಿಕೆಗೆ ಖರ್ಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಪಾಕ್ ದುಸ್ಸಾಹಸ ಮೆರೆದಾಗಲೆಲ್ಲಾ ಸೋಲು ಕಂಡಿದೆ: ಕಾರ್ಗಿಲ್ನಲ್ಲಿ ಮೋದಿ ಭಾಷಣ
ಕಾರ್ಗಿಲ್ ವಿಜಯ್ ದಿವಸ್ನಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುವಂತಹ ಸಂದರ್ಭಗಳಲ್ಲಿಯೂ ಪ್ರಧಾನಿ ನರೇಂದ್ರ ಮೋದಿಯವರು ಕ್ಷುಲ್ಲಕ ರಾಜಕಾರಣ ಮಾಡುತ್ತಿರುವುದು ಅತ್ಯಂತ ದುರದೃಷ್ಟಕರ ಮತ್ತು ಶೋಚನೀಯವಾಗಿದೆ ಎಂದು ಖರ್ಗೆ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಈ ಹಿಂದೆ ಯಾವ ಪ್ರಧಾನಿಯೂ ಇದನ್ನು ಮಾಡಿಲ್ಲ ಎಂದು ಕುಟುಕಿದ್ದಾರೆ.
ತಮ್ಮ ಸರ್ಕಾರವು ಸೇನೆಯ ಆಜ್ಞೆಯ ಮೇರೆಗೆ ಅಗ್ನಿಪಥ ಯೋಜನೆಯನ್ನು ಜಾರಿಗೆ ತಂದಿದೆ ಎಂಬ ಪ್ರಧಾನ ಮಂತ್ರಿಯ ಹೇಳಿಕೆಯು ಶುದ್ಧ ಸುಳ್ಳು. ನಮ್ಮ ವೀರ ಸಶಸ್ತ್ರ ಪಡೆಗಳಿಗೆ ಕ್ಷಮಿಸಲಾಗದ ಅವಮಾನ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: Kargil Vijay Diwas: ದೇಶಕ್ಕಾಗಿ ಬಲಿದಾನಗೈದ ಯೋಧರಿಗೆ ಪ್ರಧಾನಿ ಮೋದಿ ನಮನ
ಮೋದಿ ಜೀ, ನೀವು ಸುಳ್ಳುಗಳನ್ನು ಹಬ್ಬಿಸುತ್ತಿದ್ದೀರಿ! ಮಾಜಿ ಸೇನಾ ಮುಖ್ಯಸ್ಥ (ನಿವೃತ್ತ) ಜನರಲ್ ಎಂಎಂ ನರವಾಣೆ ಅವರು ‘ಅಗ್ನಿಪಥ್ ಯೋಜನೆ’ಯಲ್ಲಿ 75% ನೇಮಕಾತಿಗಳನ್ನು ಖಾಯಂಗಾಗಿ ತೆಗೆದುಕೊಳ್ಳಬೇಕಾಗಿತ್ತು. 25% ಜನರನ್ನು 4 ವರ್ಷಗಳ ನಂತರ ಕೈಬಿಡಲಾಯಿತು ಎಂದು ದಾಖಲೆಯಲ್ಲಿ ಹೇಳಿದ್ದಾರೆ. ಆದರೆ ಮೋದಿ ಸರ್ಕಾರ ಇದಕ್ಕೆ ವ್ಯತಿರಿಕ್ತವಾಗಿದೆ. ಬಲವಂತವಾಗಿ ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತು ಎಂದು ಖರ್ಗೆ ಟೀಕಿಸಿದ್ದಾರೆ.
ಮಾಜಿ ಸೇನಾ ಮುಖ್ಯಸ್ಥ (ನಿವೃತ್ತ) ಜನರಲ್ ಎಂಎಂ ನರವಾಣೆ ತಮ್ಮ ಪುಸ್ತಕದಲ್ಲಿ, ‘ಅಗ್ನಿಪಥ್ ಯೋಜನೆ’ಯು ಸೇನೆಗೆ ಮತ್ತು ನೌಕಾಪಡೆ ಹಾಗೂ ವಾಯುಸೇನೆಗೆ ಆಘಾತಕಾರಿಯಾಗಿದೆ ಎಂದು ಹೇಳಿರುವುದಾಗಿ ವರದಿಗಳು ಬಂದಿವೆ ಎಂದು ಖರ್ಗೆ ತಿಳಿಸಿದ್ದಾರೆ.