ಒಂದು ಸುಳ್ಳನ್ನು ಸಾವಿರ ಬಾರಿ ಪುನರಾವರ್ತಿಸಿದರೂ ಅದು ಸತ್ಯವಾಗುವುದಿಲ್ಲ: ಖರ್ಗೆ

Public TV
4 Min Read
MALLIKARJUN KHARGE NARENDRA MODI

– ಸುದೀರ್ಘ ಪತ್ರದ ಮೂಲಕ ಕಾಂಗ್ರೆಸ್‌ ಮೇಲಿನ ಮೋದಿ ಆರೋಪಕ್ಕೆ ತಿರುಗೇಟು ನೀಡಿದ ಖರ್ಗೆ

ನವದೆಹಲಿ: ಮೊದಲ ಹಂತದ ಮತದಾನದ ಬಳಿಕ ನೀವು ಹತಾಶೆಗೊಂಡಂತೆ ಕಾಣುತ್ತಿದೆ. ನಿಮ್ಮ ಭಾಷಣದ ಸುಳ್ಳುಗಳು ಜನರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಭಾವಿಸುದಂತಿದೆ. ಅದಕ್ಕಾಗಿ ನಿಮ್ಮ ಸುಳ್ಳುಗಳನ್ನು ಎನ್‌ಡಿಎ ಅಭ್ಯರ್ಥಿಗಳು ಮುಂದುವರಿಸಬೇಕು ಎಂದು ಬಯಸಿ ಪತ್ರ ಬರೆದಂತಿದೆ. ಆದರೆ ಒಂದು ಸುಳ್ಳನ್ನು ಸಾವಿರ ಬಾರಿ ಪುನರಾವರ್ತಿಸಿದರೂ ಅದು ಸತ್ಯವಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಗೆ (Narendra Modi) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ತಿರುಗೇಟು ನೀಡಿದ್ದಾರೆ.

ಎನ್‌ಡಿಎ (NDA) ಅಭ್ಯರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಬರೆದ ಪತ್ರ ಉಲ್ಲೇಖಿಸಿ ಮರು ಪತ್ರ ಬರೆದಿರುವ ಖರ್ಗೆ, ನಿಮ್ಮ ಪತ್ರದಲ್ಲಿ ಸಾಕಷ್ಟು ಹತಾಶೆ ಮತ್ತು ಚಿಂತೆ ತೋರುತ್ತದೆ. ನಿಮ್ಮ ಪತ್ರದಲ್ಲಿನ ಭಾಷೆ ಪ್ರಧಾನಿ ಕಚೇರಿಗೆ ಹೊಂದಿಕೆಯಾಗುತ್ತಿಲ್ಲ. ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಏನೇ ಸುಳ್ಳು ಹೇಳಿದರೂ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಏನು ಬರೆದಿದೆ ಮತ್ತು ನಾವು ಏನು ಭರವಸೆ ನೀಡಿದ್ದೇವೆ ಎಂಬುದನ್ನು ಸ್ವತಃ ಮತದಾರರು ಓದಿ ಅರ್ಥಮಾಡಿಕೊಳ್ಳುವಷ್ಟು ಬುದ್ಧಿವಂತರಾಗಿದ್ದಾರೆ. ನಮ್ಮ ಖಾತರಿಗಳು ತುಂಬಾ ಸರಳ ಮತ್ತು ಸ್ಪಷ್ಟವಾಗಿದೆ. ನಾವು ಅವರಿಗೆ ಅದನ್ನು ವಿವರಿಸಬೇಕಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ಪೆನ್‍ಡ್ರೈವ್ ಪ್ರಕರಣದ ತನಿಖೆಗೆ ಸಂಪೂರ್ಣ ಸಹಕಾರ: ಅಣ್ಣಾಮಲೈ

modi bagalkot

ಅದಾಗ್ಯೂ ಕಾಂಗ್ರೆಸ್ ನ್ಯಾಯಪತ್ರದ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಸ್ಪಷ್ಟನೆ ನೀಡಿರುವ ಅವರು, ಕಾಂಗ್ರೆಸ್‌ನ ನಾಲ್ಕು ನ್ಯಾಯ ಯೋಜನೆಗಳು ಯುವಕರು, ಮಹಿಳೆಯರು, ರೈತರು ಮತ್ತು ಕಾರ್ಮಿಕರನ್ನು ಸಶಕ್ತಿಗೊಳಿಸಲಿದೆ. ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ನೀವು ಮತ್ತು ಗೃಹ ಸಚಿವರು ಹೇಳುವುದನ್ನು ಕೇಳಿದ್ದೇವೆ. ಆದರೆ ಕಳೆದ 10 ವರ್ಷಗಳಲ್ಲಿ ನಾವು ನೋಡಿದ ಒಂದೇ ಒಂದು ತುಷ್ಟೀಕರಣ ನೀತಿಯೆಂದರೆ ನೀವು ಮತ್ತು ನಿಮ್ಮ ಮಂತ್ರಿಗಳು ಚೀನಿಯರನ್ನು ಓಲೈಸುವುದು. ಇಂದಿಗೂ ನೀವು ಚೀನಾವನ್ನು ಭಾರತದ ಪ್ರದೇಶ ಅತಿಕ್ರಮಣ ಮಾಡಿಕೊಂಡಿಲ್ಲ ಎಂದು ಹೇಳುತ್ತಿದ್ದೀರಿ. ಈ ಮೂಲಕ ಗಾಲ್ವಾನ್‌ನಲ್ಲಿ 20 ಭಾರತೀಯ ಸೈನಿಕರ ಅತ್ಯುನ್ನತ ತ್ಯಾಗವನ್ನು ಅವಮಾನಿಸಿದ್ದೀರಿ. ಸಾರ್ವಜನಿಕವಾಗಿ ಚೀನಾಕ್ಕೆ ನೀಡಿದ ‘ಕ್ಲೀನ್ ಚಿಟ್’ ಭಾರತವನ್ನು ದುರ್ಬಲಗೊಳಿಸಿದೆ‌. ಅರುಣಾಚಲ ಪ್ರದೇಶ, ಲಡಾಖ್ ಮತ್ತು ಉತ್ತರಾಖಂಡದ ಎಲ್‌ಎಸಿ ಬಳಿ ಚೀನಾದ ಪುನರಾವರ್ತಿತ ಉಲ್ಲಂಘನೆ ಮತ್ತು ಮಿಲಿಟರಿ ಮೂಲಸೌಕರ್ಯ ನಿರ್ಮಾಣದಿಂದಾಗಿ ಉದ್ವಿಗ್ನತೆ ಹೆಚ್ಚುತ್ತಿರುವಾಗಲೂ, ಭಾರತಕ್ಕೆ ಚೀನಾದ ಸರಕುಗಳ ಆಮದು ಕಳೆದ 5 ವರ್ಷಗಳಲ್ಲಿ 54.76% ರಷ್ಟು ಹೆಚ್ಚಾಗಿದೆ ಮತ್ತು 2023 ರಲ್ಲಿ 101 ಬಿಲಿಯನ್ ಡಾಲರ್‌ ದಾಟಿದೆ ಎಂದಿದ್ದಾರೆ‌.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ಕಿತ್ತುಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ನಿಮ್ಮ ಪತ್ರದಲ್ಲಿ ನೀವು SC, ST ಮತ್ತು OBC ಯಿಂದ ಮೀಸಲಾತಿಯನ್ನು ಕಿತ್ತು ‘ನಮ್ಮ ಮತಬ್ಯಾಂಕ್’ಗೆ ನೀಡಲಾಗುವುದು ಎಂದು ಹೇಳುತ್ತೀರಿ. ಹೌದು ಪ್ರತಿಯೊಬ್ಬ ಭಾರತೀಯ, ಬಡವರು, ಮಹಿಳೆಯರು, ಮಹತ್ವಾಕಾಂಕ್ಷೆಯ ಯುವಕರು, ಕಾರ್ಮಿಕ ವರ್ಗ, ದಲಿತರು ಮತ್ತು ಆದಿವಾಸಿಗಳು ನಮ್ಮ ಮತಬ್ಯಾಂಕ್ ಎಂದು ತಿರುಗೇಟು ನೀಡಿದ್ದಾರೆ. ಮುಂದುವರಿದು 1947 ರಿಂದ ಪ್ರತಿ ಹಂತದಲ್ಲೂ ಮೀಸಲಾತಿಯನ್ನು ವಿರೋಧಿಸಿದವರು ಆರ್‌ಎಸ್‌ಎಸ್ ಮತ್ತು ಬಿಜೆಪಿ ಎಂದು ಎಲ್ಲರಿಗೂ ತಿಳಿದಿದೆ. ಮೀಸಲಾತಿಯನ್ನು ಕೊನೆಗೊಳಿಸಲು ಸಂವಿಧಾನವನ್ನು ಬದಲಾಯಿಸಲು ಬಯಸುತ್ತಿರುವುದು ಆರ್‌ಎಸ್‌ಎಸ್ ಮತ್ತು ಬಿಜೆಪಿ ಎಂದು ಎಲ್ಲರಿಗೂ ತಿಳಿದಿದೆ. ನಿಮ್ಮ ನಾಯಕರು ಈ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ನಮ್ಮ ಸಂವಿಧಾನದ 16ನೇ ವಿಧಿಯ ಪ್ರಕಾರ ಜನಸಂಖ್ಯೆಯ ಆಧಾರದ ಮೇಲೆ SC, ST ಮತ್ತು OBC ಗಳಿಗೆ ನೀಡಿದ ಮೀಸಲಾತಿಯನ್ನು ನೀವು ಏಕೆ ವಿರೋಧಿಸುತ್ತೀರಿ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: 1980 ರ ಲೋಕಸಭಾ ಚುನಾವಣೆಗೆ ಮತದಾನ ನಡೆದಿದ್ದು ಕೇವಲ 4 ದಿನ

MALLIKARJUN KHARGE 1

ದೇಶದ ಸಂಪತ್ತು ಸಮುದಾಯವೊಂದಕ್ಕೆ ಹಂಚುವ ಆರೋಪಕ್ಕೆ ಉತ್ತರಿಸಿ, ಜನರ ಕಷ್ಟಪಟ್ಟು ದುಡಿದ ಹಣವನ್ನು ಕಸಿದುಕೊಳ್ಳಲಾಗುವುದು ಎಂದು ಹೇಳಿದ್ದೀರಿ. ಗುಜರಾತ್‌ನ ಬಡ ದಲಿತ ರೈತರಿಂದ ವಂಚಿಸಿ ಬಿಜೆಪಿಗೆ ಚುನಾವಣಾ ಬಾಂಡ್‌ಗಳಾಗಿ ನೀಡಿರುವ 10 ಕೋಟಿ ರೂ.ಗಳನ್ನು ಹಿಂದಿರುಗಿಸಲು ನಿಮ್ಮ ಪಕ್ಷಕ್ಕೆ ನಾನು ವಿನಂತಿಸುತ್ತೇನೆ. ನಿಮ್ಮ ಪಕ್ಷ ಬಾಂಡ್ ಕೊಡಿ, ಕೆಲಸ ಪಡೆಯಿರಿ, ಹಫ್ತಾ ವಸೂಲಿ, ನಕಲಿ ಕಂಪನಿಗಳ ಮೂಲಕ ಅಕ್ರಮವಾಗಿ ಹಣ ಪಡೆದಿದೆ. ಚುನಾವಣಾ ಬಾಂಡ್‌ಗಳ ಮೂಲಕ 8,250 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಆ 8,250 ಕೋಟಿಗಳಲ್ಲಿ ಕನಿಷ್ಠ 10 ಕೋಟಿ ರೂಪಾಯಿಯನ್ನು ಈ ದಲಿತ ಕುಟುಂಬಕ್ಕೆ ಹಿಂತಿರುಗಿಸಬಹುದು ಎಂದಿದ್ದಾರೆ‌.

ನಿಮ್ಮ ಹಿಂದಿನ ಹಣಕಾಸು ಸಚಿವರು ಮತ್ತು ನಿಮ್ಮ ಪಕ್ಷದ ನಾಯಕರು ಪಿತ್ರಾರ್ಜಿತ ತೆರಿಗೆ ವ್ಯವಸ್ಥೆ ಬೇಕು ಎಂದು ಪದೇ ಪದೇ ಪ್ರಸ್ತಾಪಿಸುತ್ತಿರುವಾಗ ಕಾಂಗ್ರೆಸ್ ಪಿತ್ರಾರ್ಜಿತ ತೆರಿಗೆಯನ್ನು ತರಲು ಬಯಸುತ್ತದೆ ಎಂದು ಸುಳ್ಳು ಹೇಳುತ್ತಿದ್ದೀರಿ. ನಿಮ್ಮ ನಾಯಕರ ಈ ಭಾಷಣಗಳು ಮತ್ತು ಹೇಳಿಕೆಗಳನ್ನು ಜನರು ಆನ್‌ಲೈನ್‌ನಲ್ಲಿ ನೋಡಬಹುದು. ಮೊದಲೆರಡು ಹಂತದ ಚುನಾವಣೆಗಳಲ್ಲಿ ಕಡಿಮೆ ಮತದಾನವಾಗಿರುವುದರ ಬಗ್ಗೆ ನೀವು ಚಿಂತೆಗೀಡಾಗಿದ್ದೀರಿ. ನಿಮ್ಮ ನೀತಿಗಳು ಅಥವಾ ನಿಮ್ಮ ಪ್ರಚಾರ ಭಾಷಣಗಳ ಬಗ್ಗೆ ಜನರು ಉತ್ಸಾಹ ಹೊಂದಿಲ್ಲ ಎಂದು ಇದು ತೋರಿಸುತ್ತದೆ. ನಿಮ್ಮ ನೀತಿಗಳಿಂದ ಬಡವರು ಸುಟ್ಟು ಹೋಗಿದ್ದಾರೆ. ಧರ್ಮದ ಹೆಸರಿನಲ್ಲಿ ಮತದಾರರನ್ನು ಒಗ್ಗೂಡಿಸುವಂತೆ ನಿಮ್ಮ ಕಾರ್ಯಕರ್ತರಿಗೆ ಮನವಿ ಮಾಡಿದ್ದೀರಿ. ಮತದಾರರು ನಿಮಗೆ ಮತ ಹಾಕಲು ಉತ್ಸುಕರಾಗದಿದ್ದರೆ, ನಿಮ್ಮ ಕಾರ್ಯಕರ್ತರನ್ನು ದೂಷಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಖರ್ಗೆ ವ್ಯಂಗ್ಯ ಮಾಡಿದ್ದಾರೆ‌. ಇದನ್ನೂ ಓದಿ: ಅಮೇಥಿ, ರಾಯ್‌ಬರೇಲಿ ಹೈವೋಲ್ಟೇಜ್‌ ಕ್ಷೇತ್ರಗಳಿಗೆ ಇಂದು ಅಭ್ಯರ್ಥಿಗಳ ಘೋಷಣೆ ಸಾಧ್ಯತೆ!

Share This Article