ಬೆಂಗಳೂರು: ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ನನ್ನ ಮಾರ್ಗದರ್ಶಕರು ಹಾಗು ನಮ್ಮ ನಾಯಕರು. ಅವರಿಗೆ ಸಿಎಂ ಸ್ಥಾನ ಸಿಗದೆ ಇರುವುದು ನಮಗೆ ನಿರಾಸೆ ಮೂಡಿಸಿದೆ ಎಂದು ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.
ನಗರದ ಪ್ರೆಸ್ ಕ್ಲಬ್ ಏರ್ಪಡಿಸಲಾಗಿದ್ದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನನ್ನ ಬೆಳವಣಿಗೆಗೆ ಮಲ್ಲಿಕಾರ್ಜುನ ಖರ್ಗೆ ಅವರು ಸಹಕಾರಿಯಾದರು. ನಮ್ಮ ತಂದೆ ತೀರಿಕೊಂಡ ಬಳಿಕ 15 ವರ್ಷಗಳ ಕಾಲ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ನಿರ್ವಹಿಸಿದರು. ನಾವು ಒಂದೇ ಕುಟುಂಬದ ಸದಸ್ಯರಂತೆ ಬೆಳೆದು ಬಂದವರು. ತಾವು ನಂಬಿದ ತತ್ವ ಸಿದ್ದಾಂತದ ರಾಜೀಯಾದವರಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೊಂಡಾಡಿದರು.
ಇದೇ ವೇಳೆ ಖರ್ಗೆ ಅವರಿಗೆ ಸಿಎಂ ಸ್ಥಾನ ಸಿಗದೆ ಇರುವುದು ನಮಗೆ ನಿರಾಸೆ ತಂದಿದೆ. ಬೇರೆ ಬೇರೆ ಕಾರಣಗಳಿಂದ ಖರ್ಗೆ ಅವರು ಸಿಎಂ ಆಗಲಿಲ್ಲ. ಇದಕ್ಕೆ ಅವರದೇ ಆದ ಕಾರಣಗಳು ಇರಬಹುದು. ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇಟ್ಟುಕೊಂಡಿರುವ ದೂರದೃಷ್ಟಿತ್ವ ಹೊಂದಿದ ನಾಯಕರೊಬ್ಬರಿಗೆ ಸಿಎಂ ಸ್ಥಾನ ಸಿಗದಿರುವುದು ರಾಜ್ಯಕ್ಕೆ ಆದ ನಷ್ಟ. ದೆಹಲಿ ರಾಜಕಾರಣದಲ್ಲೂ ಸಹ ತಮ್ಮದೇ ಆದ ವರ್ಚಸ್ಸು ಬೆಳೆಸಿಕೊಂಡಿದ್ದಾರೆ ಎಂದರು.
ಲೋಕಸಭಾ ಸಂಸದೀಯ ನಾಯಕರಾದ ಸಂದರ್ಭವನ್ನು ನೆನಪಿಸಿಕೊಂಡ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾದಾಗ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ದಕ್ಷಿಣ ಭಾರತದಿಂದ ಬಂದವರಿಗೆ ಹಿಂದಿ ಬರಲ್ಲ ಎಂದು ಹೇಳಿದ್ದರು. ಆದರೆ ಲೋಕಸಭೆಯಲ್ಲಿ ಅವರ ಕಾರ್ಯವೈಖರಿ ಬಗ್ಗೆ ಸೋನಿಯಾಗಾಂಧಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಕುರಿತು ನನ್ನ ಬಳಿ ಸ್ವತಃ ಸೋನಿಯಾಗಾಂಧಿ ಹೇಳಿದ್ದರು ಎಂದರು.