ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಗುರು ಶಿಷ್ಯರ ಕಾಳಗ ಶುರುವಾಗಿದೆ. ಶತಾಯಗತಾಯ ಸಿಎಲ್ಪಿ ನಾಯಕನಾಗಲು ಮಾಜಿ ಡಿಸಿಎಂ ಪರಮೇಶ್ವರ್ ಪ್ರಯತ್ನ ಮಾಡುತ್ತಿದ್ದಾರೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಪರಮಾಪ್ತರಾದ ಪರಮೇಶ್ವರ್ ಗೆ ಸಿಎಲ್ಪಿ ನಾಯಕನ ಸ್ಥಾನ ಪಡೆಯುವುದು ಕಷ್ಟವೂ ಅಲ್ಲ. ಆದರೆ ಪರಮೇಶ್ವರ್ ಪ್ರಯತ್ನಕ್ಕೆ ಪರೋಕ್ಷವಾಗಿ ಅವರ ರಾಜಕೀಯ ಗುರು ಮಲ್ಲಿಕಾರ್ಜುನ ಖರ್ಗೆಯವರೇ ಅಡ್ಡಿಯಾಗಿದ್ದಾರೆ. ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಸಹ ಸಿಎಲ್ಪಿ ನಾಯಕನ ಸ್ಥಾನಕ್ಕಾಗಿ ಲಾಬಿ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಹೆಚ್.ಕೆ.ಪಾಟೀಲ್ ತಮ್ಮ ಪರವಾಗಿ ಹೈಕಮಾಂಡ್ ಮನವೊಲಿಸುವಂತೆ ಮಲ್ಲಿಕಾರ್ಜುನ ಖರ್ಗೆ ಮೊರೆ ಹೋಗಿದ್ದಾರೆ. ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯದ ಹೆಚ್.ಕೆ.ಪಾಟೀಲ್ ಪರವಾಗಿ ಖರ್ಗೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅನಿರೀಕ್ಷಿತವಾಗಿ ಈ ವಿಷಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಪರಮೇಶ್ವರ್ ಮುಖಾಮುಖಿಯಾಗಿದ್ದಾರೆ.
ಮಲ್ಲಿಕಾರ್ಜುನ ಖರ್ಗೆಯವರಿಗೆ ಹೆಚ್.ಕೆ.ಪಾಟೀಲ್ ಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕಾದರೆ ತಮ್ಮ ಶಿಷ್ಯ ಪರಂಗೆ ಕೊಕ್ಕೆ ಹಾಕಲೇಬೇಕು. ಆದರೆ ತಮ್ಮದೇ ರೀತಿಯಲ್ಲಿ ದೆಹಲಿಯಲ್ಲಿ ಲಾಬಿ ಮಾಡುತ್ತಿರುವ ಪರಮೇಶ್ವರ್ ತಮಗಿರುವ ಸಂಪರ್ಕ ಬಳಸಿ ಖರ್ಗೆಯವರ ಮಾತನ್ನು ಮೀರಿ ಹೆಚ್.ಕೆ.ಪಾಟೀಲ್ ಗೆ ಸೆಡ್ಡು ಹೊಡೆದಿದ್ದಾರೆ ಎನ್ನಲಾಗಿದೆ.
ಹೀಗೆ ವಿಚಿತ್ರ ರಾಜಕೀಯ ಪರಿಸ್ಥಿತಿಯಲ್ಲಿ ಗುರು-ಶಿಷ್ಯರು ಎದುರ ಬದುರು ನಿಂತ ತೊಡೆ ತಟ್ಟಿದ್ದಾರೆ. ಹೆಚ್.ಕೆ.ಪಾಟೀಲ್ ಗೆ ಸ್ಥಾನಮಾನ ಕೊಡಿಸಿ ಗುರು ಮಲ್ಲಿಕಾರ್ಜುನ ಖರ್ಗೆ ಸೈ ಅನ್ನಿಸಿಕೊಳ್ತಾರಾ? ತಮ್ಮ ಪವರ್ ಬಳಸಿ ಸಿಎಲ್ ಪಿ ನಾಯಕನಾಗಿ ಪರಮೇಶ್ವರ್ ಮಲ್ಲಿಕಾರ್ಜುನ ಖರ್ಗೆಗಿಂತ ಪವರ್ ಫುಲ್ ಅನ್ನಿಸಿಕೊಳ್ತಾರ ಅನ್ನೋದೆ ಸದ್ಯದ ಕುತೂಹಲ.