ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಸ್ಕ್ಯಾಂಡಲ್ ನಡೆದಿದ್ದು, `ಮೊದಲ ಸಲ’ ನಿರ್ಮಾಪಕ ದರ್ಶನ್ ಆಪ್ತ ಮಲ್ಲಿಕಾರ್ಜುನ್ ಕೋಟಿ ಕೋಟಿ ವಂಚನೆ ಮಾಡಿ ಜುಲೈನಲ್ಲಿ ನಾಪತ್ತೆಯಾಗಿದ್ದು, ಇಂದಿಗೂ ಎಲ್ಲಿದ್ದಾನೆ ಎಂದು ಪತ್ತೆಯಾಗಿಲ್ಲ.
ತೂಗುದೀಪ ಡಿಸ್ಟ್ರಿಬ್ಯೂಟರ್ಸ್ ಇತ್ತೀಚೆಗೆ ಬಿಡುಗಡೆಗೊಂಡಿದ್ದ `ಪ್ರೇಮ ಬರಹ’ ಸಿನಿಮಾದ ವಿತರಣೆ ಹೊಣೆಯನ್ನು ಹೊತ್ತಿತ್ತು. ಮೊದಲ ವಾರದ ಗಳಿಕೆ 35 ಲಕ್ಷ ರೂ. ಅಂತ ನಿರ್ಮಾಪಕ ಅರ್ಜುನ್ ಸರ್ಜಾಗೆ ಮಲ್ಲಿ ಹೇಳಿದ್ದನು. ಆದರೆ ಮಲ್ಲಿ ಹೇಳಿಕೆ ಮತ್ತು ತೋರಿಸಿದ ಅಂಕಿ ಅಂಶಗಳ ಬಗ್ಗೆ ಅರ್ಜುನ್ ಸರ್ಜಾ ಅವರು ಅನುಮಾನ ವ್ಯಕ್ತಪಡಿಸಿದ್ದರು. ನಂತರ ಮಲ್ಲಿ ಸುಳ್ಳು ಹೇಳಿ ಸಿಕ್ಕಿಬಿದ್ದಿದ್ದಾನೆ. ಕೊನೆಗೆ ಮಲ್ಲಿಕಾರ್ಜುನ್ ಸರ್ಜಾರಿಗೆ 1 ಕೋಟಿ ರೂಪಾಯಿ ಚೆಕ್ ನೀಡಿದ್ದಾನೆ. ಇದನ್ನೂ ಓದಿ: ದರ್ಶನ್ ಮ್ಯಾನೇಜರ್ ದೋಖಾ ಕಥೆ ಬಯಲಾಗಲು ನಟ ಅರ್ಜುನ್ ಸರ್ಜಾ ಕಾರಣ?
ಹೀಗೆ ತಾನು ಮಾಡಿದ ಬಂಡವಾಳ ಬಯಲಾದ ಎರಡು ವಾರದಲ್ಲೇ ಯಾರ ಕೈಗೂ ಸಿಗದೇ ಮಲ್ಲಿ ಪರಾರಿಯಾಗಿದ್ದನು. ಜೊತೆಗೆ ತೂಗುದೀಪ ಕುಟುಂಬಕ್ಕೆ ಮಸಿ ಬಳಿಯಲೂ ಯತ್ನಿಸಿದ್ದನು. ಈಗ ಮಲ್ಲಿ ಕಲಬುರಗಿಯಲ್ಲಿರುವ ಕುಟುಂಬಕ್ಕೆ ಚೆನ್ನೈನಿಂದ ಪತ್ರ ಬರೆದು ಕ್ಷೇಮ ಎಂದಿದ್ದಾನೆ. ಆದರೆ ಜುಲೈನಲ್ಲಿ ನಾಪತ್ತೆಯಾದ ಮಲ್ಲಿಕಾರ್ಜುನ್ ಎಲ್ಲಿದ್ದಾನೆ ಅನ್ನೋದು ಇಂದಿಗೂ ಯಾರಿಗೂ ತಿಳಿಯಲಿಲ್ಲ.
ಮಲ್ಲಿ ತೂಗುದೀಪ ಪ್ರೊಡಕ್ಷನ್ಸ್ ನ ಆರ್ಥಿಕ ವ್ಯವಹಾರದ ಹೊಣೆಯನ್ನು ಹೊತ್ತಿದ್ದನು. ಇದೇ ಅವಕಾಶವನ್ನು ಉಪಯೋಗಿಸಿಕೊಂಡು ಕಂಡ ಕಂಡವರ ಬಳಿ ಸುಮಾರು 10 ಕೋಟಿ ರೂ.ಗೂ ಹೆಚ್ಚು ಸಾಲಮಾಡಿದ್ದಾನೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಅಷ್ಟೇ ಅಲ್ಲದೇ ಅಡ್ಡದಾರಿಯಲ್ಲಿ ದುಡ್ಡುಮಾಡುವ ಚಟಕ್ಕೆ ಬಿದ್ದಿದ್ದನು. ನಂತರ ಕೋಟಿ ಕೋಟಿ ಸಾಲ ಮಾಡಿ ರೈಸ್ ಪುಲ್ಲಿಂಗ್ ದಂಧೆಯಲ್ಲಿ ಎಲ್ಲವನ್ನು ಕಳೆದುಕೊಂಡಿದ್ದನು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv