ಚಾಮರಾಜನಗರ: ರಾಜ್ಯದ ಎರಡನೇ ಅತಿ ಹೆಚ್ಚು ಆದಾಯ ತರುವ ಕ್ಷೇತ್ರವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಗುರುವಾರ ತಡರಾತ್ರಿವರೆಗೂ ಹುಂಡಿ ಎಣಿಕೆ ನಡೆದಿದ್ದು, ಒಟ್ಟು 1,88,21,108 ರೂ. ಕಾಣಿಕೆ ಸಂಗ್ರಹವಾಗಿದೆ.
ಎಣಿಕೆಯಲ್ಲಿ ನಿರತರಾದ ಸಿಬ್ಬಂದಿ ಶ್ರೀ ಕ್ಷೇತ್ರದಲ್ಲಿ ನಡೆಯುವ ಧನುರ್ಮಾಸ ತಿಂಗಳಲ್ಲಿ ಸಂಗ್ರಹವಾಗಿರುವ ಅತಿ ಹೆಚ್ಚಿನ ಕಾಣಿಕೆ ಇದಾಗಿದೆ. ಶಿವರಾತ್ರಿ ಜಾತ್ರೆಯಲ್ಲಿ 2 ಕೋಟಿ ರೂ., ಯುಗಾದಿ ಜಾತ್ರೆಯಲ್ಲಿ 1.95 ಕೋಟಿ ರೂ., ಕಾಣಿಕೆ ಸಂಗ್ರಹದ ದಾಖಲೆ ಹೊಂದಿದ್ದು, ಧನುರ್ಮಾಸ ತಿಂಗಳಲ್ಲಿ ಇದೇ ಹೆಚ್ಚಿನ ಸಂಗ್ರಹ ಮೊತ್ತವಾಗಿದೆ ಎಂದು ಮೂಲಗಳು ತಿಳಿಸಿವೆ.
ಉಳಿದಂತೆ 48 ಗ್ರಾಂ ಚಿನ್ನ, 1,800 ಕೆಜಿ ಬೆಳ್ಳಿ ಕಾಣಿಕೆ ರೂಪದಲ್ಲಿ ಮಲೆ ಒಡೆಯನಿಗೆ ಭಕ್ತರು ಅರ್ಪಿಸಿದ್ದಾರೆ. ಹುಂಡಿ ಎಣಿಕೆಯೂ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ಭಾರೀ ಬಿಗಿ ಬಂದೋಬಸ್ತ್ ನೊಂದಿಗೆ ಸಾಲೂರು ಮಠದ ಹಿರಿಯಶ್ರೀ ನೇತೃತ್ವದಲ್ಲಿ ನಡೆಯಿತು.