ಚಾಮರಾಜನಗರ: ಪಾವಿತ್ರತೆಗೆ ಹೆಸರಾಗಿರುವ ಮಲೆಮಹದೇಶ್ವರ ಬೆಟ್ಟದಲ್ಲಿ ಸ್ನಾನ ಮಾಡಿದರೆ ಪಾಪಗಳು ಕಳೆದು ಹೋಗುತ್ತವೆ ಎಂದುಕೊಂಡಿರುವ ಭಕ್ತರಿಗೆ ಕಾಯಿಲೆಗಳು ಬರುವ ಎಲ್ಲಾ ಲಕ್ಷಣಗಳು ಮಾದಪ್ಪನ ಸನ್ನಿಧಿಯಲ್ಲಿ ಗೋಚರವಾಗುತ್ತಿವೆ.
ರಾಜ್ಯದಲ್ಲಿ ಅತೀ ಹೆಚ್ಚು ಆದಾಯ ತಂದುಕೊಡುವ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿರುವ ಮಲೆಮಹದೇಶ್ವರ ಬೆಟ್ಟ ಇದೀಗ ಅಕ್ಷರಶಃ ಕಾಯಿಲೆಗಳನ್ನು ತಂದೊಡ್ಡುವ ಸ್ಥಿತಿಯಲ್ಲಿ ಇದೆ.
ಮಾದಪ್ಪನ ದರ್ಶನ ಪಡೆಯುವ ಮುನ್ನ ಸನ್ನಿಧಿಯಲ್ಲಿರುವ ಅಂತರಗಂಗೆಯಲ್ಲಿ ಭಕ್ತರು ಮುಳುಗಿದರೆ ಪಾವಿತ್ರತೆ ಬರುತ್ತೆ ಎಂದು ನಂಬಿದ್ದಾರೆ. ಆದರೆ ಇದೀಗ ಈ ಅಂತರ ಗಂಗೆಯಲ್ಲಿ ಮುಳುಗಿದರೆ ಪಾವಿತ್ರತೆ ಬರಲ್ಲ, ಬದಲಾಗಿ ಕಾಯಿಲೆಗಳು ಬಂದೊದಗುತ್ತವೆ. ಪಾವಿತ್ರತೆಗೆ ಹೆಸರಾಗಿರುವ ಅಂತರಗಂಗೆ ಇದೀಗ ಅಕ್ಷರಶಃ ಮಲೀನಗೊಂಡು ಕೊಳಕು ನಾರುತ್ತಿದೆ ಎಂದು ಭಕ್ತರು ಹೇಳುತ್ತಿದ್ದಾರೆ.
ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರದ ಬೇಜವಾಬ್ದಾರಿಯಿಂದ ಅಂತರಗಂಗೆಯಲ್ಲಿ ಕೊಳಕು ನೀರು ಸೇರಿಕೊಂಡು ಈ ನೀರು ತನ್ನ ಪವಿತ್ರತೆ ಕಳೆದುಕೊಂಡು ಕಾಯಿಲೆಯನ್ನು ತಂದೊಡ್ಡುವ ಸ್ಥಾನವಾಗಿ ಬದಲಾಗಿದೆ. ಈ ನೀರಲ್ಲಿ ಪ್ರತಿನಿತ್ಯ ಸಾವಿರಾರು ಭಕ್ತರು ಮುಳುಗಿ ಮಾದಪ್ಪನ ದರ್ಶನ ಪಡೆಯುತ್ತಾರೆ.
ಇದಲ್ಲದೇ ನವಂಬರ್ 6, 7 ರಂದು ಮಾದಪ್ಪನ ಬೆಟ್ಟದಲ್ಲಿ ನಡೆಯುವ ದೀಪಾವಳಿ ದೊಡ್ಡ ರಥೋತ್ಸವಕ್ಕೆ ಲಕ್ಷಕ್ಕೂ ಅಧಿಕ ಭಕ್ತರು ಬರುತ್ತಾರೆ. ಅವರೆಲ್ಲರೂ ಇದೇ ಅಂತರಗಂಗೆಗೆ ಬಂದು ಮುಳುಗುತ್ತಾರೆ. ಭಕ್ತರು ಇಲ್ಲಿ ಮುಳುಗಿದರೆ ಜೀವನ ಪವಿತ್ರವಾಗುತ್ತೆ ಎಂಬ ಭಾವನೆಯಿಂದ ಮುಳುಗುತ್ತಾರೆ. ಆದರೆ ಪ್ರಾಧಿಕಾರದ ಕುರುಡು ನಡೆಯಿಂದ ಭಕ್ತರು ಮಾರಕ ಕಾಯಿಲೆಗಳಿಗೆ ತುತ್ತಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಭಕ್ತ ಶಿವಕುಮಾರ್ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv