ಬೆಂಗಳೂರು: ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಈ ಮೂರೂ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ರಾಜರಾಜೇಶ್ವರಿನಗರದಲ್ಲಿ ಇಂದು ಮತದಾನ ನಡೆಯುತ್ತಿದೆ.
ಸದ್ಯಕ್ಕೆ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸುಗಮ ಮತದಾನ ನಡೆಯುತ್ತಿದೆ. 11 ಗಂಟೆ ಹೊತ್ತಿಗೆ ಶೇಕಡಾ 10ಕ್ಕೂ ಹೆಚ್ಚು ಮತದಾನ ಆಗಿದೆ. ಆದರೆ ಮೌಂಟ್ ಕಾರ್ಮೆಲ್ ಸ್ಕೂಲ್ ಮತಗಟ್ಟೆಯಲ್ಲಿ ಮತ ಹಾಕಲು ನಟಿ ಮಾಳವಿಕಾ ಅವಿನಾಶ್ ಮತ್ತು ನಟ ಅವಿನಾಶ್ ಬಂದಿದ್ದರು. ಈ ವೇಳೆ ಮತಗಟ್ಟೆಗೆ ಹೋಗಲು ಮೆಟ್ಟಿಲು ಹತ್ತುವಾಗ ಮಾಳವಿಕಾ ಎಡವಿ ಬಿದ್ದಿದ್ದಾರೆ. ನಂತರ ಮಾಳವಿಕಾ ಅವಿನಾಶ್ ಮೇಲೆ ಎದ್ದು, ಮತಗಟ್ಟೆಗೆ ಹೋಗಿ ಮತ ಚಲಾಯಿಸಿದ್ದಾರೆ.
ಮತ ಚಲಾಯಿಸಿ ಮಾಧ್ಯಮರೊಂದಿಗೆ ಮಾತನಾಡಿದ ಮಾಳವಿಕಾ ಅವಿನಾಶ್ ದಂಪತಿ, ವೋಟ್ ಬೂತ್ ಗೆ ಎಂಟ್ರಿ ಆದಾಗ, ನಮಗೆ ಆ ಶಕ್ತಿ ಇದೆ ಅಂತ ಅಹಂಕಾರ ಬರುತ್ತದೆ. ಅದು ನಮ್ಮ ಕರ್ತವ್ಯ. ಅದು ನಮ್ಮ ಜವಬ್ದಾರಿ. ಆದಷ್ಟು ಬೇಗ ಬಂದು ವೋಟ್ ಮಾಡಿ ಎಂದು ನಾಗರಿಕರಲ್ಲಿ ಮನವಿ ಮಾಡಿದರು.
ಕ್ಷೇತ್ರವನ್ನು ಗೆದ್ದು ವಿಧಾನಸಭಾ ಸದಸ್ಯ ಬಲವನ್ನು ಹೆಚ್ಚಿಸಿಕೊಳ್ಳಲು ಬಿಜೆಪಿ ಹಪಹಪಿಸುತ್ತಿದ್ರೆ, ಮತ್ತೊಂದು ಕಡೆ ಮೈತ್ರಿಕೂಟದ ಜೆಡಿಎಸ್ ಹಾಗೂ ಕಾಂಗ್ರೆಸ್ ಪ್ರತ್ಯೇಕವಾಗಿ ಕಣಕ್ಕಿಳಿದಿವೆ. ಇಂದು ಬೆಳಗ್ಗೆ 7ರಿಂದ ಸಂಜೆ 7 ಗಂಟೆಯವರೆಗೆ ಮತದಾನ ನಡೆಯಲಿದೆ. ಆರ್ ಆರ್ ನಗರದಲ್ಲಿ 4 ಲಕ್ಷದ 71 ಸಾವಿರದ 459 ಮತದಾರರಿದ್ದು, ಒಟ್ಟು 421 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.
ಬಿಜೆಪಿ ಪರ ಮುನಿರಾಜು ಕಣಕ್ಕೆ ಇಳಿದಿದ್ರೆ, ಕಾಂಗ್ರೆಸ್ ಅಭ್ಯರ್ಥಿಯಾಗಿ ಮುನಿರತ್ನ ಕಣಕ್ಕೆ ಇಳಿದಿದ್ದಾರೆ. ಇನ್ನು ಜೆಡಿಎಸ್ನಿಂದ ನಟಿ ಅಮೂಲ್ಯ ಮಾವ ಜಿ.ಎಚ್.ರಾಮಚಂದ್ರ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ನಡುವೆ ಬಿಜೆಪಿ ಬಂದ್ಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಆರ್.ಆರ್.ನಗರದಲ್ಲೂ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಅಪಾರ್ಟ್ ಮೆಂಟ್ ನಲ್ಲಿ ಮತದಾರರ ಗುರುತಿನ ಚೀಟಿಗಳು ಪತ್ತೆಯಾದ ಹಿನ್ನೆಲೆಯಲ್ಲಿ ರಾಜರಾಜೇಶ್ವರಿನಗರದ ಚುನಾವಣೆಯನ್ನು ಇಂದಿಗೆ ಮುಂದೂಡಲಾಗಿತ್ತು.