ಬಾಗಲಕೋಟೆ: ಕ್ಷಣ ಕ್ಷಣಕ್ಕೂ ಮಲಪ್ರಭಾ ನದಿಯ ಅಬ್ಬರ ಹೆಚ್ಚಾಗುತ್ತಲೇ ಇದ್ದು, ಬಾದಾಮಿ ತಾಲೂಕಿನ ವಿವಿಧ ಗ್ರಾಮಗಳು ಜಲಾವೃತವಾಗಿದೆ. ಇತ್ತ ವಿಶ್ವಪಾರಂಪರಿಕ ಪಟ್ಟಿಗೆ ಸೇರಿರುವ ಪಟ್ಟದಕಲ್ಲು, ಐಹೊಳೆ ರಸ್ತೆ ಸಂಪರ್ಕ ಕೂಡ ಸ್ಥಗಿತಗೊಂಡಿದೆ.
ಭಾರೀ ಮಳೆಯಿಂದ ಮಲಪ್ರಭಾ ನದಿಗೆ ಹೆಚ್ಚಿನ ಪ್ರಾಮಾಣದಲ್ಲಿ ನೀರು ಹರಿದು ಬರುತ್ತಿದ್ದು, ನದಿ ಪಾತ್ರದ ಗ್ರಾಮಗಳು ನೀರಿನಲ್ಲಿ ಮುಳುಗಿಹೋಗಿದೆ. ಅಲ್ಲಿನ ಗ್ರಾಮಸ್ಥರು ಮನೆ-ಮಠ ಕಳೆದುಕೊಂಡ ಕಂಗಾಲಾಗಿದ್ದಾರೆ. ಜೊತೆಗೆ ಮೇವಿನ ಬಣವೆ, ಬೆಳೆಗಳು ಜಲಾವೃತಗೊಂಡಿದ್ದು, ವಿದ್ಯುತ್ ಕಂಬಗಳು ನೆಲಕ್ಕುರುಳಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.
ಇತ್ತ ಪಟ್ಟದಕಲ್ಲು, ಐಹೊಳೆ ಗ್ರಾಮಗಳ ರಸ್ತೆ ಸಂಪರ್ಕ ಬಂದ್ ಆಗಿದೆ. ಗುಳೇಸಗುಡ್ಡ, ಆಸಂಗಿ, ಕೊಟ್ನಳ್ಳಿ, ಕಟಗಿನಹಳ್ಳಿ, ಲಯಲಗುಂದಿ ಮಾರ್ಗವಾಗಿ ಹೋಗುವ ಮಾರ್ಗದಲ್ಲಿ ನೀರು ತುಂಬಿ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ಇಷ್ಟೆಲ್ಲಾ ಅವಾಂತರ ಸೃಷ್ಟಿಯಾಗಿದ್ದು ಅಧಿಕಾರಿಗಳು ಮಾತ್ರ ಇತ್ತ ಗಮನಹರಿಸಿಲ್ಲ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಾಗೆಯೇ ದಯವಿಟ್ಟು ಅಗತ್ಯ ಸೌಲಭ್ಯ ಒದಗಿಸಿ ಎಂದು ಕೋರಿಕೊಂಡಿದ್ದಾರೆ.