ಬೆಂಗಳೂರು : ಇಂದು ಮಕರ ಸಂಕ್ರಾಂತಿಯ ಪುಣ್ಯ ದಿನ. ಇವತ್ತು ಸೂರ್ಯ ತನ್ನ ಪಥ ಬದಲಿಸುವ ಹಿನ್ನೆಲೆ ಗುಟ್ಟಳ್ಳಿಯ ಗವಿಗಂಗಾಧರನನ್ನು ಸೂರ್ಯ ರಶ್ಮಿ ಸ್ಪರ್ಶಿಸಲಿದೆ. ಪ್ರತಿ ವರ್ಷದಂತೆ ಈ ವರ್ಷವೂ ಮಕರ ಸಂಕ್ರಾಂತಿ ಹಬ್ಬದ ದಿನ ಸೂರ್ಯನ ರಶ್ಮಿ ಸಂಜೆ 5:23 ರಿಂದ 5:35 ರ ಸಮಯದಲ್ಲಿ ದೇವರನ್ನು ಸ್ಪರ್ಶಿಸಲಿದೆ.
ಈ ಹಿನ್ನೆಲೆ ಗವಿಗಂಗಾಧರ ದೇವಾಲಯದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳಗ್ಗೆ 6 ಗಂಟೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆ ಆರಂಭಗೊಂಡಿದೆ. ಶಿವನಿಗೆ ರುದ್ರಾಭಿಷೇಕ ಸೇರಿ ವಿಶೇಷ ಪೂಜಾ ಕೈಂಕರ್ಯಗಳು ಆರಂಭಗೊಂಡಿವೆ.
ಸಂಜೆ ಸೂರ್ಯ ರಶ್ಮಿ ಬೀಳುವ ಸಮಯದಲ್ಲಿ ದೇವರಿಗೆ ಸತತವಾಗಿ ಕ್ಷೀರಾಭಿಷೇಕ ನಡೆಯಲಿದೆ. ನಂತರ ಸೂರ್ಯರಶ್ಮಿಯಿಂದ ಪುಳಕಿನಾದ ಶಿವನಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗುತ್ತದೆ. ಅದೇ ರೀತಿ ದೇವರ ಮೇಲೆ ಹೆಚ್ಚು ಕಾಲ ಸೂರ್ಯ ರಶ್ಮಿ ಉಳಿಯಬಾರದು. ಕಳೆದ ವರ್ಷ ಸೂರ್ಯ ರಶ್ಮಿ 1 ನಿಮಿಷ 3 ಸೆಕೆಂಡುಗಳ ಕಾಲ ದೇವರ ಮೇಲೆ ಇತ್ತು. ಅದರ ಪರಿಣಾಮವಾಗಿ ರಾಜ್ಯದಲ್ಲಿ ಅನೇಕ ದುಷ್ಪರಿಣಾಮಗಳು ಸಂಭವಿಸಿದ್ದವು. ಕಳೆದ ಬಾರಿ ಆದ ಅನಾಹುತಗಳು ಈ ಬಾರಿ ಆಗಬಾರದೆಂದು ಪ್ರಾರ್ಥಿಸುತ್ತೇವೆ ಎಂದು ಪ್ರಧಾನ ಅರ್ಚಕರು ಹೇಳುತ್ತಾರೆ.
ಅದೇ ರೀತಿ ಭಾಸ್ಕರನಿಂದ ಪುಳಕಿತನಾದ ಶಿವನನ್ನ ಕಣ್ತುಂಬಿಕೊಳ್ಳೋಕೆ ಭಕ್ತ ಸಾಗರವೇ ಕಾತುರದಿಂದ ಕಾಯುತ್ತಿದೆ. ಒಟ್ಟಿನಲ್ಲಿ ಸೂರ್ಯರಶ್ಮಿಯಿಂದ ಪುಳಕಿತನಾದ ಪರಮೇಶ್ವರನನ್ನ ಕಣ್ಣು ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸಲಿದ್ದಾರೆ.