ಹೈದರಾಬಾದ್: ಇಂಟರ್ ನ್ಯಾಷನಲ್ ಇನ್ಸ್ ಸ್ಟಿಟ್ಯೂಟ್ ಆಫ್ ಇನ್ಫಾರ್ ಮೇಷನ್ ಟೆಕ್ನಾಲಜಿ(ಐಐಐಟಿ) ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಗಚಿ ಬೌಲಿ ನಗರದಲ್ಲಿ ನಡೆದಿದೆ.
ಪುಲಿ ಸುನಂದ್ ಕುಮಾರ್ ರೆಡ್ಡಿ(21) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಈತ ಹೈದರಾಬಾದ್ ನ ಐಐಐಟಿ ಕಾಲೇಜಿನಲ್ಲಿ ನಾಲ್ಕನೇ ವರ್ಷದ ಸಿಎಸ್ಡಿ ವ್ಯಾಸಂಗ ಮಾಡುತ್ತಿದ್ದು, ಓಲ್ಡ್ ಬಾಯ್ಸ್ ಹಾಸ್ಟೆಲ್ ಕ್ಯಾಂಪಸ್ ನಲ್ಲಿದ್ದನು. ಈತ ಮಹೇಶ್ ಬಾಬು ಅಭಿಮಾನಿಯಾಗಿದ್ದು, ಗುರುವಾರ ತನ್ನ ಹಾಸ್ಟೆಲ್ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸುನಂದ್ ಗೆ ಸ್ನೇಹಿತರು ಫೋನ್ ಮಾಡಿದ್ದಾರೆ. ಆದರೆ ಆತ ಅವರ ಫೋನಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲಿಲ್ಲ. ಆದ್ದರಿಂದ ಸುನಂದ್ ಸ್ನೇಹಿತರಾದ ಸಾಯಿ ಸಾಹಿತ್ ಮತ್ತು ರೋಹಿತ್ ಅವರು ಆತನ ರೂಮಿಗೆ ಹೋಗಿ ಬಾಗಿಲನ್ನು ಬಡಿದ್ದಾರೆ. ಸುನಂದ್ ಬಾಗಿಲು ತೆಗೆಯಲಿಲ್ಲ. ಬಳಿಕ ಬಾಗಿಲು ಮುರಿದು ಒಳಗೆ ಹೋಗಿದ್ದಾರೆ. ಆಗ ಸುಂನದ್ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ನಂತರ ಅವರು ಕೂಡಲೇ ನಮಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ ಎಂದು ಗಚಿ ಬೌಲಿ ಪೊಲೀಸ್ ಠಾಣೆಯ ಎಸ್.ಐ ಚಿಂತಕಾಯಲಾ ವೆಂಕಟೇಶ್ ತಿಳಿಸಿದ್ದಾರೆ.
ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆದಿದ್ದಾರೆ. ಆಗ ಸ್ಥಳದಲ್ಲಿ ಎರಡು ಡೆತ್ ನೋಟ್ ಪತ್ತೆಯಾಗಿದೆ. ಮೊದಲಿಗೆ ಸುನಂದ್ ತನ್ನ ಪೋಷಕರಿಗೆ ಡೆತ್ನೋಟ್ ಬರೆದಿದ್ದು, `ಅಪ್ಪ- ಅಮ್ಮ, ನಾನು ಈ ಲೋಕವನ್ನು ಬಿಟ್ಟು ಹೋಗುತ್ತಿದ್ದೇನೆ. ನಾನು ನಿಮ್ಮಬ್ಬರನ್ನು ತುಂಬಾ ಪ್ರೀತಿಸುತ್ತೇನೆ. ಆದರೆ ನಮ್ಮ ಸಂಬಂಧಿಕರು ನನಗೆ ಇಷ್ಟವಿಲ್ಲ. ಅವರಿಗೆ ಬೇಕಾದಾಗ ಮಾತ್ರ ಅವರು ನಮ್ಮ ಹತ್ತಿರ ಬರುತ್ತಾರೆ. ಇದು ಭಾರತದ ಸಮಸ್ಯೆಯಾಗಿದೆ ಎಂದು ಬರೆದಿದ್ದಾನೆ.
ಮತ್ತೊಂದು ಡೆತ್ ನೋಟಿನಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು ಅವರನ್ನು ಉಲ್ಲೇಖಿಸಿ, “ನಾನು ಖಿನ್ನತೆಗೆ ಒಳಗಾದಾಗ ನಾನು ಯಾವಾಗಲೂ ನಿಮ್ಮ ಸಿನಿಮಾಗಳನ್ನು ವೀಕ್ಷಿಸುತ್ತಿದ್ದೇನೆ. ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ, ನೀವು ನನ್ನ ವೈದ್ಯರು. ನೀವು ನನಗೆ ಸ್ಫೂರ್ತಿಯಾಗಿದ್ದೀರಿ” ಎಂದು ಬರೆದಿದ್ದಾನೆ.
ಗಚಿ ಬೌಲಿ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರೆಸಿದ್ದಾರೆ. ಮೃತ ಆನಂದ್ ದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದಾರೆ.